ದಾವಣಗೆರೆ: ‘ಮೀಸಲಾತಿ ಸಂಬಂಧ ಹೋರಾಟದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಹಾಗೂ ಕೂಡಲಸಂಗಮದ ಪೀಠ ಒಂದಾಗಬೇಕು ಎಂಬ ಆಲೋಚನೆಯನ್ನು ನಾನು ಸ್ವಾಗತಿಸುತ್ತೇನೆ. ಈ ಹೋರಾಟದಲ್ಲಿ ಜೊತೆಗೂಡಲು ರಾಜ್ಯ ಸಮಿತಿ ಮೂಲಕ ಆಹ್ವಾನವನ್ನೂ ನೀಡಲಾಗುವುದು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
‘ಸಮಾಜದ ಅಭಿವೃದ್ಧಿ ಮತ್ತು ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಪ್ರಮುಖ ಉದ್ದೇಶದಿಂದಲೇ ಪೀಠಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ರೂಪದಲ್ಲಾದರೂ ಸರಿಯೇ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಪಂಚಮಸಾಲಿ ಸಮಾಜಕ್ಕೆ ಮಂತ್ರಿಗಿರಿಗಿಂತಲೂ ಮೀಸಲಾತಿ ಬೇಕು. ನಮ್ಮ ಸಮಾಜದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ 17 ಜನರು ಇದ್ದಾರೆ. ಅದಕ್ಕೆ ಅನುಗುಣವಾಗಿ ಮಂತ್ರಿ ಸ್ಥಾನ ಕೊಟ್ಟಿಲ್ಲ. ನಮಗೂ ಕೇಳಿ ಕೇಳಿ ಬೇಸರವಾಗಿದೆ. ಹೀಗಾಗಿ ಮಂತ್ರಿಗಿರಿಯನ್ನು ಕೇಳುವುದೇ ಇಲ್ಲ ಎಂದು ಮುಖ್ಯಮಂತ್ರಿಗೆ ಹೇಳಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.