ADVERTISEMENT

ಕಳಚಿ ಬೀಳುವಂತಿದೆ ಕೆಪಿಎಸ್ ಶಾಲೆ

ಮಾಯಕೊಂಡ: ಶೌಚಾಲಯದ ಜೊತೆ ಬೇಕಿದೆ ಹೊಸ ಕಟ್ಟಡ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:57 IST
Last Updated 21 ಡಿಸೆಂಬರ್ 2025, 6:57 IST
ಶಿಥಿಲಾವಸ್ಥೆಗೆ ತಲುಪಿರುವ ಮಾಯಕೊಂಡದ ಕೆಪಿಎಸ್ ಶಾಲಾ ಕಟ್ಟಡ 
ಶಿಥಿಲಾವಸ್ಥೆಗೆ ತಲುಪಿರುವ ಮಾಯಕೊಂಡದ ಕೆಪಿಎಸ್ ಶಾಲಾ ಕಟ್ಟಡ    

ಮಾಯಕೊಂಡ: ಅಂದಾಜು ಏಳು ದಶಕಗಳ ಹಿಂದೆ ನಿರ್ಮಾಣವಾಗಿದ್ದ, ಹಲವರು ಸುಂದರ ಬದುಕು ಕಟ್ಟಿಕೊಳ್ಳಲು ವೇದಿಕೆ ಕಲ್ಪಿಸಿದ್ದ, ಕ್ರಮೇಣ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೇರಿದ್ದ ಇಲ್ಲಿನ ಶಾಲಾ ಕಟ್ಟಡದ ಸ್ಥಿತಿ ಈಗ ದೇವರಿಗೆ ಪ್ರೀತಿ ಎಂಬಂತಾಗಿದೆ. ಕಟ್ಟಡ ಯಾವಾಗ ಕುಸಿದು ಬೀಳುತ್ತದೋ ಎಂಬ ಭಯದಲ್ಲೇ ವಿದ್ಯಾರ್ಥಿಗಳು ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

ಮಾಯಕೊಂಡ ಹೋಬಳಿ ಕೇಂದ್ರ ಮಾತ್ರವಲ್ಲ, ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವೂ ಹೌದು. ಇಲ್ಲಿನ ಕೆಪಿಎಸ್‌ ಶಾಲೆ ದಾವಣಗೆರೆ ತಾಲ್ಲೂಕಿನಲ್ಲೇ ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿರುವ ಶಾಲೆ‌ ಎಂಬ ಹೆಗ್ಗಳಿಕೆ ಹೊಂದಿದೆ. ಈ ಶಾಲೆ ಸ್ಥಿತಿ ಚಿಂತಾಜನಕವಾಗಿದೆ. 1949ರಲ್ಲಿ ನಿರ್ಮಾಣ ಆಗಿರುವ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 395 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಬೇಸಿಗೆಯಲ್ಲಿ ಚಾವಣಿಯ ಸಿಮೆಂಟ್‌ ಪದರ ಕಳಚಿ ವಿದ್ಯಾರ್ಥಿಗಳ ಮೇಲೆ ಬೀಳುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯ ಜೀವ ಕೈಯಲ್ಲಿ ಹಿಡಿದೇ ಕುಳಿತುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ADVERTISEMENT

ಶಾಲೆಯಲ್ಲಿ ಒಟ್ಟು 18 ಕೊಠಡಿಗಳಿವೆ. ಇವುಗಳಲ್ಲಿ 13 ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ. ದುರಸ್ತಿಗೂ ಬಾರದಂತಹ ಸ್ಥಿತಿಗೆ ಇವು ತಲುಪಿವೆ. ಆ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕಾಗಿದೆ. ಇಲ್ಲವಾದರೆ ವಿದ್ಯಾರ್ಥಿಗಳಿಗೆ ಅಪಾಯ ನಿಶ್ಚಿತ ಎಂಬ ಆತಂಕ ಪೋಷಕರದ್ದು.

ಇರುವುದೊಂದೇ ಶೌಚಾಲಯ: ಶಾಲೆಯಲ್ಲಿ ನೂರಾರು ವಿದ್ಯಾರ್ಥಿನಿಯರಿಗೆ ಒಂದೇ ಶೌಚಗೃಹವಿದೆ. ಹೀಗಾಗಿ ಸರದಿಯಲ್ಲಿ ಕಾಯುವ ಅನಿವಾರ್ಯತೆ ಎದುರಾಗಿದೆ. ಬಾಲಕರಿಗಂತೂ ಬಯಲೇ ಶೌಚಾಲಯ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಶೌಚಾಲಯ ನಿರ್ಮಿಸಬೇಕು ಎಂಬುದೂ ಪೋಷಕರ ಒತ್ತಾಯ.

ಕೆಪಿಎಸ್ ಶಾಲಾ ಕಟ್ಟಡದ ಸಿಮೆಂಟ್ ಕಿತ್ತು ಕಬ್ಬಿಣದ ಸರಳು ಕಾಣುತ್ತಿರುವುದು 
ಶಾಲೆಗೆ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು 

ಉಪವಿಭಾಗಾಧಿಕಾರಿ ಭೇಟಿ

ಶಾಲೆಗೆ ಶನಿವಾರ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ‘ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಹೊಸ ಕಟ್ಟಡ ನಿರ್ಮಾಣದ ಅಗತ್ಯವಿದೆ. ಶೀಘ್ರ ಪ್ರಸ್ತಾವ ಸಲ್ಲಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ  ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಸೂಚಿಸಿದರು. ‘₹ 2.60 ಲಕ್ಷ ಅನುದಾನ ಬಿಡುಗಡೆ ಮಾಡಿ ಶೀಘ್ರ ಶೌಚಾಲಯ ನಿರ್ಮಾಣ ಮಾಡಲಾಗುವುದು’ ಎಂದು ಪಿಡಿಒ ಹನುಮಂತಪ್ಪ ತಿಳಿಸಿದರು. ಉಪ ತಹಶೀಲ್ದಾರ್ ಹಾಲೇಶಪ್ಪ ಗ್ರಾಮಾಡಳಿತ ಅಧಿಕಾರಿ ಪ್ರಭಾಕರ್ ಕೆಪಿಎಸ್ ಉಪ ಪ್ರಾಚಾರ್ಯ ನಾಗರಾಜಪ್ಪ ಶಿಕ್ಷಕರಾದ ರವಿಕುಮಾರ್ ನಾಗರಾಜಪ್ಪ ಮುಖಂಡರಾದ ಲಿಂಗರಾಜ್ ಎಂ.ಜಿ. ಗುರುನಾಥ್ ಉಮಾಶಂಕರ್ ಬೀರಪ್ಪ ಎಚ್.ಆರ್. ಹಾಲೇಶ್ ವೀರೇಶ್ ಮಾಲತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.