ADVERTISEMENT

ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ; ಕಾನೂನು ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 15:55 IST
Last Updated 2 ಆಗಸ್ಟ್ 2023, 15:55 IST
ಎಸ್.ರುದ್ರೇಶ್
ಎಸ್.ರುದ್ರೇಶ್   

ಸಾಸ್ವೆಹಳ್ಳಿ: ‘ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಮೆಸ್ಕಾಂ ಮಾಜಿ ನಿರ್ದೇಶಕ ಎಸ್.ರುದ್ರೇಶ್ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ಯೋಜನೆಗಳನ್ನು ಧರ್ಮಾಧಿಕಾರಿ ಜಾರಿಗೊಳಿಸುವ ಮೂಲಕ ಜನ ಸೇವೆಯಲ್ಲಿ ತೊಡಗಿದ್ದಾರೆ. ಶ್ರೀ ಕ್ಷೇತ್ರದ ಬಗ್ಗೆ ಮಾಡುತ್ತಿರುವ ಇಲ್ಲಸಲ್ಲದ ಆರೋಪಗಳು ನಾಡಿನಾದ್ಯಂತ ಇರುವ ಭಕ್ತರ ಮನಸ್ಸಿಗೆ ತೀವ್ರ ಘಾಸಿಯನ್ನುಂಟು ಮಾಡಿದೆ’ ಎಂದರು.

‘ಹೆಗ್ಗಡೆಯವರು ತಮ್ಮ ದೂರದರ್ಶಿತ್ವದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಕಚೇರಿಗಳನ್ನು ಕರ್ನಾಟಕದ ಪ್ರತೀ ತಾಲ್ಲೂಕುಗಳಲ್ಲೂ ಪ್ರಾರಂಭ ಮಾಡಿ 40.000 ಕ್ಕೂ ಅಧಿಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಯೋಜನೆಯ ಮೂಲಕ 1.5 ಕೋಟಿ ಜನರಿಗೆ ವಿಮಾ ಸೌಲಭ್ಯ, 87 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಸರ್ಕಾರದ ಆರೋಗ್ಯ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ನೆರವಾಗಿದ್ದು, ಈ ಯೋಜನೆಯ ಕಾರ್ಯ ವೈಖರಿಗಳನ್ನು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.