ದಾವಣಗೆರೆ: ಕಾನೂನು ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಕೆಲವು ಕಾಯ್ದೆಗಳನ್ನು ಕಲಿಸಲಾಗುತ್ತದೆ. ಇತ್ತೀಚೆಗೆ ಜಾರಿಗೆ ಬಂದ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ, ಎನ್.ಡಿ.ಪಿ.ಎಸ್. ಕಾಯ್ದೆ, ಪೋಕ್ಸೊ, ಕೆಲಸದ ಸ್ಥಳದಲ್ಲಿ ಲೈಂಗಿಕ ಪೀಡನೆಯಂತಹ ಕಾಯ್ದೆಗಳನ್ನು ವಕೀಲರು ಅಧ್ಯಯನ ಮಾಡಬೇಕಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.
ವಕೀಲರ ದಿನಾಚರಣೆ ಪ್ರಯುಕ್ತ ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾನೂನು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಕಾಯ್ದೆಗಳು ಹಾಗೂ ತಿದ್ದುಪಡಿಗಳನ್ನು ವಕೀಲರು ಚೆನ್ನಾಗಿ ತಿಳಿದುಕೊಂಡಾಗ ಕಕ್ಷಿದಾರರನ್ನು ವಿಶ್ವಾಸಕ್ಕೆ ಪಡೆಯಲು, ನ್ಯಾಯದಾನಕ್ಕೆ ನೆರವಾಗಲು ಸಾಧ್ಯ ಎಂದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀಪಾದ್, ‘ವಕೀಲರು ಹೊಸ ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಪ್ರಕರಣಗಳ ಬಗ್ಗೆ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಲು ಹಾಗೂ ಗೊಂದಲವಿಲ್ಲದೇ ತೀರ್ಪು ಪಡೆಯಲು ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದಶರಥ, ‘ಸಂವಿಧಾನ ರಚನೆಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಬಲವಾಗಿರುವುದರಿಂದ, ವಕೀಲರ ಅಗತ್ಯ ಹೆಚ್ಚಾಗಿದೆ’ ಎಂದು ತಿಳಿಸಿದರು.
ವೇದಿಕೆಯ ಮೇಲೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ವಿ. ವಿಜಯಾನಂದ, ಪ್ರಧಾನ ಸಿವಿಲ್ ನ್ಯಾಯಮೂರ್ತಿ ಪ್ರೀತಿ ಸದ್ಗುರು ಸದರ್ ಜೋಷಿ ಇದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ. ಬಸವರಾಜ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.