ADVERTISEMENT

ಶಿಕ್ಷಣದಲ್ಲಿ ಭಾರತೀಯತೆ ಇರಲಿ: ದಿನೇಶ್ ಹೆಗ್ಡೆ

ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:37 IST
Last Updated 8 ಮಾರ್ಚ್ 2021, 5:37 IST
ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಭಾನುವಾರ ನಡೆದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಪ್ರವೇಶಾತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಪಾಲಿಕೆ ಸದಸ್ಯ ಕೆ.ಟಿ.ವೀರೇಶ್, ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ, ಮೇಯರ್ ಎಸ್.ಟಿ. ವೀರೇಶ್, ಶಾಸಕ ಎಸ್.ಎ. ರವೀಂದ್ರನಾಥ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಅಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಜಯಣ್ಣ ಇದ್ದರು.  –ಪ್ರಜಾವಾಣಿ ಚಿತ್ರ
ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಭಾನುವಾರ ನಡೆದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಪ್ರವೇಶಾತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಪಾಲಿಕೆ ಸದಸ್ಯ ಕೆ.ಟಿ.ವೀರೇಶ್, ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ, ಮೇಯರ್ ಎಸ್.ಟಿ. ವೀರೇಶ್, ಶಾಸಕ ಎಸ್.ಎ. ರವೀಂದ್ರನಾಥ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಅಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಜಯಣ್ಣ ಇದ್ದರು.  –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಷ್ಟ್ರೋತ್ಥಾನ ಕೇಂದ್ರಗಳು ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ಚಿಂತನೆಯನ್ನು ಬೆಳೆಸುವ ಕೆಲಸ ಮಾಡುತ್ತಿವೆ ಎಂದುರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಹೇಳಿದರು.

ಇಲ್ಲಿನ ಲಕ್ಷ್ಮಿ ಲೇಔಟ್‌ನಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯದಿಂದ ನಿರ್ಮಿಸಿರುವ ‘ರಾಷ್ಟ್ರೋತ್ಥಾನ ಗೋಕುಲಂ’ ಶಾಲಾ ಕೊಠಡಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರಗಳು ಜ್ಞಾನ ಭಂಡಾರದ ಜೊತೆಗೆ ಉತ್ಕೃಷ್ಠ ವ್ಯಕ್ತಿಗಳನ್ನು ನಿರ್ಮಾಣ ಮಾಡಿವೆ. ಸಂಸ್ಥೆಗಳು ಸಾಮಾಜಿಕ ಬದ್ಧತೆ ತಿಳಿಸುವುದರ ಜೊತೆಗೆ ಬದುಕುವ ಕಲ್ಪನೆ ಕಲಿಸುತ್ತಿವೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತಯಾರು ಮಾಡಲು ಶಾಲೆಯ ಅಧ್ಯಾಪಕರಿಗೆ ಒಳ್ಳೆಯ ದೃಷ್ಟಿ ಕೊಡಬೇಕು. ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಲು ರಾಷ್ಟ್ರೊತ್ಥಾನ ಶಾಲೆಗಳಲ್ಲದೇ ಇತರೆ ಶಾಲೆಗಳ ಶಿಕ್ಷಕರಿಗೂ ತರಬೇತಿ ನೀಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ’ ಎಂದರು.

‘ಈ ದೇಶದ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಕಾಲದ್ದಾಗಿದ್ದು, ಮೆಕಾಲೆ ಜಾರಿಗೆ ತಂದಿರುವುದು ಪಾಶ್ಚಿಮಾತ್ಯ ಶಿಕ್ಷಣ. ನಮ್ಮ ಶಿಕ್ಷಣದಲ್ಲಿ ಭಾರತೀಯತೆ ತರಬೇಕು. ಮೆಕಾಲೆ ಶಿಕ್ಷಣ ಪದ್ದತಿ ಜಾರಿಯಲ್ಲಿರುವವರೆವಿಗೂ ಇದು ಸಾಧ್ಯವಿಲ್ಲ. ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆಗಳು ಭಾರತೀಯತೆ, ಮೂಲ ಸಂಸ್ಕೃತಿಯನ್ನು ತರುವ ಹಾದಿಯಲ್ಲಿ ಕೆಲಸ ಮಾಡುತ್ತಿವೆ’ ಎಂದರು.

‘ಶಾಲೆಗಳು ಈ ಹಿಂದೆ ವ್ಯಕ್ತಿಯ ಜೀವನ ನಿರೂಪಣೆ ಮಾಡುತ್ತಿದ್ದವು. ಆದರೆ ಈಗ ಓದುವುದು, ಬರವಣಿಗೆ ಹಾಗೂ ಲೆಕ್ಕ ಮಾಡುವುದಕ್ಕಷ್ಟೇ ಸೀಮಿತವಾಗಿವೆ. ಮೂಲ ವಿಚಾರಗಳನ್ನು ತಿಳಿಸುತ್ತಿಲ್ಲ. ಮೂಲ ವಿಚಾರ ಮರೆತರೆ ದೇಶದ ಉದ್ದಾರ ಸಾಧ್ಯವಿಲ್ಲ’ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ‘ದಾವಣಗೆರೆಯಲ್ಲಿ ರಾಷ್ಟ್ರೋತ್ಥಾನ ಶಾಲೆ ಆರಂಭಿಸುವಾಗ ಕೆಲವು ಎಡಪಂಥೀಯರು ವಿರೋಧಿಸಿದರು. ಈಗ ಉತ ಆದರೆ ನಾನು ಶಿಸ್ತು, ರೀತಿ ನೀತಿ ಕಲಿಯಲು ಆರ್‌ಎಸ್‌ಎಸ್ ಕಾರಣ. ಒ.ಬಿ.ಶೇಷಾದ್ರಿ ಇನ್ನು ಮುಂತಾದ ನಾಯಕರು ಮಾರ್ಗದರ್ಶನ ನೀಡಿದರು’ ಎಂದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ‘ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ನೀಡಿದ ನಂಬರ್‌ಗೆ ಮೊದಲ ದಿನವೇ 200ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಇವುಗಳಿಗೆ ಪರಿಹಾರ ನೀಡಲು ಟಾಸ್ಕ್‌ಫೋರ್ಸ್ ರಚನೆ ಮಾಡಲಾಗುವುದು. ಪಾಲಿಕೆ ಸದಸ್ಯರ ಜೊತೆಗೂಡಿ ಈ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಇದೇ ಸಂದರ್ಭ ಶಾಲಾ ಪ್ರವೇಶ ಕೈಪಿಡಿ ಬಿಡುಗಡೆ ಮಾಡಲಾಯಿತು. ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಅಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.