ADVERTISEMENT

ರೈತರೇ ಬೆಳೆಗಳ ಬೆಲೆ ನಿರ್ಧರಿಸಲಿ: ಪ್ರಕಾಶ್ ಕಮ್ಮರಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2022, 3:02 IST
Last Updated 28 ಮೇ 2022, 3:02 IST
ದಾವಣಗೆರೆಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ 8ನೇ ಮೇ ಸಾಹಿತ್ಯ ಮೇಳದಲ್ಲಿ ಪ್ರಕಾಶ್ ಕಮ್ಮರಡಿ ‘ಗ್ರಾಮ ಭಾರತ’ ವಿಷಯ ಕುರಿತು ಮಾತನಾಡಿದರು. ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ. ತೇಜಸ್ವಿ ಪಟೇಲ್, ಕೆ.ಪಿ.ಸುರೇಶ್, ಆವರೆಗೆರೆ ರುದ್ರಮುನಿ ಇದ್ದರು.
ದಾವಣಗೆರೆಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ 8ನೇ ಮೇ ಸಾಹಿತ್ಯ ಮೇಳದಲ್ಲಿ ಪ್ರಕಾಶ್ ಕಮ್ಮರಡಿ ‘ಗ್ರಾಮ ಭಾರತ’ ವಿಷಯ ಕುರಿತು ಮಾತನಾಡಿದರು. ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ. ತೇಜಸ್ವಿ ಪಟೇಲ್, ಕೆ.ಪಿ.ಸುರೇಶ್, ಆವರೆಗೆರೆ ರುದ್ರಮುನಿ ಇದ್ದರು.   

ದಾವಣಗೆರೆ: ಕೃಷಿ ವಲಯದಲ್ಲಿ ಬಿಕ್ಕಟ್ಟಿಲ್ಲ. ಬದಲಾಗಿ ಅನ್ನದಾತರಲ್ಲಿ ಮಾತ್ರ ಬಿಕ್ಕಟ್ಟಿದೆ ಎಂದು ಕೃಷಿ ಬೆಲೆಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.

ಇಲ್ಲಿನ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ 8ನೇ ಮೇ ಸಾಹಿತ್ಯ ಮೇಳದಲ್ಲಿ ‘ಗ್ರಾಮ ಭಾರತ’ ವಿಷಯ ಕುರಿತು ಅವರು ಮಾತನಾಡಿದರು.

‘ನ್ಯಾಷನಲ್ ಕ್ರೈಮ್ ಬ್ಯೂರೊ ಮಾಹಿತಿಯ ಪ್ರಕಾರ ಭಾರತದಲ್ಲಿ 10 ವರ್ಷಗಳಗಳಲ್ಲಿ 10 ಸಾವಿರ ಕೃಷಿಕರು, ಪ್ರತಿದಿನ 27ರಿಂದ 28 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ದೇಶದಲ್ಲಿ ರೈತರು ಹೇಗೆ ಬದುಕುತ್ತಿದ್ದಾರೆ ಎಂದು ಯಾವ ಅಂಕಿ ಅಂಶಗಳು ಹೇಳುತ್ತಿಲ್ಲ. ಶೇ 75ರಷ್ಟು ಮಂದಿ ಒಂದು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಈ ದೇಶದಲ್ಲಿ ಕೊರೊನಾ ಸಮಯದಲ್ಲಿ ಕೈಗಾರಿಕಾ ಹಾಗೂ ಸೇವಾ ವಲಯಗಳು ಮುಚ್ಚಿಹೋದ ಸಂದರ್ಭದಲ್ಲಿಯೂ ಕೃಷಿ ವಲಯ ಪ್ರಗತಿ ಸಾಧಿಸಿತು. 100 ಮಿಲಿಯನ್ ಟನ್ ಆಹಾರ ಕೊಳೆಯುತ್ತಿದೆ. ತರಕಾರಿ, ಹಾಲು, ಹಣ್ಣುಗಳು ಸಮೃದ್ಧವಾಗಿ ಬೆಳೆದವು. ಇಲ್ಲದಿದ್ದರೆ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು’ ಎಂದು ಹೇಳಿದರು.

‘ಇಂದು ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೇ ಭರವಸೆ ಶೂನ್ಯರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನ್ಸೂನ್ ಹಾಗೂ ಮಾರುಕಟ್ಟೆ ರೈತರ ದೊಡ್ಡ ಶತ್ರುಗಳು, ಜೀವನ ಭದ್ರತೆ ಇಲ್ಲದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೇರೆ ಬೇರೆ ವಸ್ತುಗಳಿಗೆ ಬೆಲೆಯನ್ನು ಮಾಲೀಕರೇ ನಿರ್ಧರಿಸುತ್ತಾರೆ. ಆದರೆ ಕೃಷಿಕರು ಮಾತ್ರ ತಾವು ಬೆಳೆದ ಉತ್ಪನ್ನಗಳಿಗೆ ಬೆಲೆಯನ್ನು ನಿರ್ಧರಿಸುವ ಪರಿಸ್ಥಿತಿ ಇಲ್ಲ. ಬದಲಾಗಿ ಬೆಂಬಲ ಬೆಲೆಗೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರೈತರು ಒಂದೇ ಬೆಳೆಯನ್ನು ಅವಲಂಬಿಸದೇ ಆದಾಯ ತರುವ ವಿವಿಧ ಬೆಳೆಗಳನ್ನು ಬೆಳೆಯಬೇಕು’ ಎಂದು ವಿಶ್ಲೇಷಿಸಿದರು.

ಉಪನ್ಯಾಸಕ ಕೆ.ಪಿ.ಸುರೇಶ್ ಮಾತನಾಡಿ, ‘ಗ್ರಾಮ ಭಾರತ ಎಂದರೆ ಕೇವಲ ಕೃಷಿಕರು ಮಾತ್ರ ಎಂಬಂತಾಗಿದೆ. ಆದರೆ ಕೂಲಿಕಾರರು, ಮಹಿಳೆಯರು ಅಂಚಿಗೆ ಸರಿದಿದ್ದಾರೆ.ಮಳೆಯಾಶ್ರಿತ ಪ್ರದೇಶಗಳ ರೈತರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಹೇಳಿದರು. ರೈತ ಮುಖಂಡರಾದ ತೇಜಸ್ವಿ ಪಟೇಲ್, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.