ADVERTISEMENT

ಮಲೇಬೆನ್ನೂರು | ಭತ್ತದ​ ಒಣ ಹುಲ್ಲಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 8:27 IST
Last Updated 16 ಡಿಸೆಂಬರ್ 2025, 8:27 IST
ಮಲೇಬೆನ್ನೂರು ಪಟ್ಟಣದ ಮೂಲಕ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ ಮೂಲಕ ಸಾಗಣೆ ಮಾಡುತ್ತಿರುವ ರೈತರು 
ಮಲೇಬೆನ್ನೂರು ಪಟ್ಟಣದ ಮೂಲಕ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ ಮೂಲಕ ಸಾಗಣೆ ಮಾಡುತ್ತಿರುವ ರೈತರು    

ಮಲೇಬೆನ್ನೂರು: ಪ್ರಸಕ್ತ ಮಳೆಗಾಲದ ಹಂಗಾಮಿನ ಭದ್ರಾ ಅಚ್ಚುಕಟ್ಟಿನ ಭಾಗದ ಭತ್ತ ಬಹುತೇಕ ಒಕ್ಕಲಾಗಿದ್ದು, ಒಣಗಿದ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ.

ಆದರೆ, ತಡವಾಗಿ ಬಿತ್ತನೆ ಮಾಡಿದ ಅಚ್ಚುಕಟ್ಟಿನ ಕೊನೆಭಾಗದ ಪ್ರದೇಶದಲ್ಲಿ ಭತ್ತದ ಒಕ್ಕಲು ಈಗ ಆರಂಭವಾಗಿದೆ.

‘ಅಕಾಲಿಕ ಮಳೆ, ಮಂಜು ಶೀಥ ಬಾಧೆಗೆ ಭತ್ತದ ಹುಲ್ಲು ತೊಯ್ದಿದ್ದು, ಹಸಿಯಾಗಿ ಕೊಳೆತು ಹೋಗಿದೆ. ಅಲ್ಪ ಸ್ವಲ್ಪ ಒಣಗಿದ ಹುಲ್ಲು ಸಿಗುವ ಕಡೆ ಹುಡಕಾಟ ನಡೆಸಬೇಕಿದೆ’ ಎಂದು ರಟ್ಟಿಹಳ್ಳಿ ಬಸವರಾಜ್ ತಿಳಿಸಿದರು.

ADVERTISEMENT

‘ಅಕ್ಕಪಕ್ಕದ ಹೊನ್ನಾಳಿ, ಚನ್ನಗಿರಿ, ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಕಾರಿಪುರ ಭಾಗದಿಂದ ರೈತರು ಟ್ರ್ಯಾಕ್ಟರ್ ಮೂಲಕ ಹುಲ್ಲನ್ನು ಕೊಂಡು ಸಾಗಣೆ ಮಾಡುತ್ತಿದ್ದಾರೆ. ಪ್ರತಿ ಟ್ರ್ಯಾಕ್ಟರ್ ಒಣ ಹುಲ್ಲಿಗೆ ₹ 7,000ದಿಂದ ₹ 8,000, ಪೆಂಡೆಗೆ ₹ 400 ಮುಟ್ಟಿದೆ ಎಂದು ಕುಡುಪಲಿ ತಿಪ್ಪಣ್ಣ’ ಮಾಹಿತಿ ನೀಡಿದರು.

ಪ್ರತಿವರ್ಷ ₹ 5,000ಕ್ಕೆ ಒಂದು ಟ್ರ್ಯಾಕ್ಟರ್ ಹುಲ್ಲು ಸಿಗುತ್ತಿತ್ತು. ಈ ಬಾರಿ ಬೆಲೆ ಹೆಚ್ಚಳವಾಗಿದೆ. ಬಹುತೇಕ ಕಡೆ ಹುಲ್ಲು ಕೊಳೆತು ಗುಣಮಟ್ಟ ಕುಸಿದಿದೆ. ಮಳೆ ನಿಂತ ನಂತರ ಕಟಾವು ಮಾಡಿದ ಒಣಗಿದ ಹುಲ್ಲು ಸಿಗುತ್ತಿದೆ. ಆದರೆ, ಬೆಲೆ ಸ್ವಲ್ಪ ಹೆಚ್ಚಾಗಿದೆ. ಸಾಗಣೆ ದರ ಕೂಡ ಗಮನಾರ್ಹವಾಗಿ ಹೆಚ್ಚಿದೆ.

ರಾತ್ರಿ ಸಾಗಣೆ ನಿಷೇಧಿಸಿ: ‘ಭತ್ತದ ಹುಲ್ಲು ಸಾಗಣೆ ಮಾಡುವ ಟ್ರ್ಯಾಕ್ಟರ್ ರಾತ್ರಿ ವೇಳೆ ಚಳಿ ಮಂಜಿನಿಂದಾಗಿ ವಾಹನ ಸವಾರರಿಗೆ ರಸ್ತೆ ಗೋಚರಿಸುವುದಿಲ್ಲ. ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಟ್ರ್ಯಾಕ್ಟರ್‌ನಲ್ಲಿ ಓವರ್‌ ಲೋಡ್‌ ಹುಲ್ಲು ಸಾಗಣೆ ಮಾಡುವುದರಿಂದ ವಿದ್ಯುತ್‌ ಮಾರ್ಗಗಳಿಗೆ ತಗುಲಿ ವಿದ್ಯುತ್‌ ಪ್ರವಹಿಸುವ ಸಂಭವ ಹೆಚ್ಚು. ಆದ್ದರಿಂದ ಜಿಲ್ಲಾಡಳಿತ ರಾತ್ರಿ ವೇಳೆ ಹುಲ್ಲು ಸಾಗಣೆ ನಿಷೇಧಿಸಬೇಕು ಎಂದು ಪಟ್ಟಣದ ನಾಗರಿಕರು ಒತ್ತಾಯಿಸಿದರು.

ಮಲೇಬೆನ್ನೂರು ಪಟ್ಟಣದ ಮೂಲಕ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ ಮೂಲಕ ಸಾಗಣೆ ಮಾಡುತ್ತಿರುವ ರೈತರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.