ADVERTISEMENT

ಚನ್ನಗಿರಿ: ಪತ್ನಿ ಕೊಲೆ ಮಾಡಿ ಶವ ಹೂತಿಟ್ಟಿದ್ದ ಪತಿ ಬಂಧನ

ಶೀಲ ಶಂಕಿಸಿ ಕೊಲೆ * ಒಂದೂವರೆ ತಿಂಗಳ ಬಳಿಕ ಪ್ರಕರಣ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 6:47 IST
Last Updated 22 ನವೆಂಬರ್ 2022, 6:47 IST
ಪತಿ ಮೋಹನ್‌ಕುಮಾರ್‌ನೊಂದಿಗೆ ಕೊಲೆಯಾದ ಚಂದ್ರಕಲಾ
ಪತಿ ಮೋಹನ್‌ಕುಮಾರ್‌ನೊಂದಿಗೆ ಕೊಲೆಯಾದ ಚಂದ್ರಕಲಾ   

ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಪತ್ನಿಯನ್ನು ಶೀಲ ಶಂಕಿಸಿ ಕೊಲೆ ಮಾಡಿದ್ದ ಪತಿ, ಶವವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪ್ರಕರಣವು ಬೆಳಕಿಗೆ ಬಂದಿದೆ.

ದಾವಣಗೆರೆ ತಾಲ್ಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಅವರ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಕೊಲೆಯಾದವರು. ಗಂಗಗೊಂಡನಹಳ್ಳಿ ಗ್ರಾಮದ ಮೋಹನ್‌ಕುಮಾರ್ (25) ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಚಂದ್ರಕಲಾ ಅವರ ಮದುವೆ ಏಳು ತಿಂಗಳ ಹಿಂದಷ್ಟೇ ನಡೆದಿತ್ತು. ಕೆಲ ದಿನಗಳ ನಂತರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಪತ್ನಿಯ ಶೀಲ ಶಂಕಿಸಿ ಮೋಹನ್‌ಕುಮಾರ್ ಆಗಾಗ ಜಗಳವಾಡುತ್ತಿದ್ದ. ಜೊತೆಗೆ ವರದಕ್ಷಿಣೆಗಾಗಿಯೂ ಪೀಡಿಸುತ್ತಿದ್ದ ಎನ್ನಲಾಗಿದೆ.

ADVERTISEMENT

ಈ ವಿಷಯವನ್ನು ಚಂದ್ರಕಲಾ ಹಲವು ಬಾರಿ ಪಾಲಕರ ಗಮನಕ್ಕೂ ತಂದಿದ್ದರು. ರಾಜಿ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೆ, ಒಂದೂವರೆ ತಿಂಗಳ ಹಿಂದೆ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿಯು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹುಣಸಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಶವವನ್ನು ಹೂತ್ತಿಟ್ಟಿದ್ದಾನೆ. ಆ ಬಳಿಕ ‘ನಿಮ್ಮ ಮಗಳು ಕಾಣೆಯಾಗಿದ್ದಾಳೆ’ ಎಂದು ಚಂದ್ರಕಲಾ ಪೋಷಕರಿಗೆ ತಿಳಿಸಿದ್ದೂ ಅಲ್ಲದೇ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ.

ಚಂದ್ರಕಲಾ ಪಾಲಕರಿಗೆ ಅನುಮಾನವಿದ್ದ ಕಾರಣ ಕೆಲವು ದಿನಗಳ ನಂತರ ಮೋಹನ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಎರಡು ದಿನಗಳ ಹಿಂದೆ ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯ ಮಾಹಿತಿ ಆಧರಿಸಿ ಶವ ಹೂತಿಟ್ಟಿದ್ದ ಸ್ಥಳಕ್ಕೆ ಸೋಮವಾರ ತೆರಳಿದ ಚನ್ನಗಿರಿ ಪೊಲೀಸರು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.