ದಾವಣಗೆರೆ: ಇಲ್ಲಿನ ತೋಳಹುಣಸೆಯಲ್ಲಿ ಬುಧವಾರ (ಜ. 30) ನಡೆಯಲಿರುವ ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ನಗರದ ಕೆ.ಸಿ. ತೇಜಸ್ವಿನಿ ಆರು ಚಿನ್ನದ ಪದಕಗಳನ್ನು ಕೊರಳಿಗೆ ಏರಿಸಿಕೊಳ್ಳಲಿದ್ದು, ವಿಶ್ವವಿದ್ಯಾಲಯದ ‘ಚಿನ್ನದ ಹುಡುಗಿ’ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಎಂ.ಎ. ವಾಣಿಜ್ಯ ವಿಭಾಗದಲ್ಲಿ ಶೇ 72.01 ಫಲಿತಾಂಶ ಪಡೆದಿರುವ ತೇಜಸ್ವಿನಿ ಅವರು ಸಾಮಾನ್ಯ ಕುಟುಂಬದ ಮೆಕ್ಯಾನಿಕಲ್ ಚಂದ್ರಪ್ಪ ಹಾಗೂ ಗೃಹಿಣಿ ರುಕ್ಮಿಣಿ ಅವರ ಪುತ್ರಿ.
ಸದ್ಯ ಜೈನ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಅವರಿಗೆ ಶಿಕ್ಷಕಿಯಾಗಿಯೇ ಸೇವೆ ಸಲ್ಲಿಸಬೇಕು ಎಂಬ ಗುರಿ ಇದೆ. ಪಿಎಚ್ಡಿ ಮಾಡಬೇಕು ಎಂಬ ಉದ್ದೇಶವನ್ನೂ ಇಟ್ಟುಕೊಂಡಿದ್ದಾರೆ.
‘ಎವಿಕೆ ಕಾಲೇಜಿನಲ್ಲಿ ಬಿಕಾಂ ಮಾಡಿದ್ದೆ. ಆಗ ಶೇ 90.14ರಷ್ಟು ಫಲಿತಾಂಶ ಪಡೆದಿದ್ದರೂ ಕೇವಲ ಒಂದು ಅಂಕ ಕಡಿಮೆ ಬಂದಿದ್ದರಿಂದ ಮೊದಲ 10 ರ್ಯಾಂಕ್ ಒಳಗಿನ ಪಟ್ಟಿಯಲ್ಲಿ ನನ್ನ ಹೆಸರು ಬಂದಿರಲಿಲ್ಲ. ಇದು ತುಂಬಾ ಬೇಸರ ಮೂಡಿಸಿತ್ತು. ಮಧ್ಯಮ ವರ್ಗದ ಕುಟುಂಬದವಳಾಗಿರುವ ನನಗೆ ಶಿಕ್ಷಣದ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು ಎಂಬ ಸವಾಲು ಇತ್ತು. ಹೀಗಾಗಿ ಸ್ನಾತಕೋತ್ತರ ಪದವಿಯಲ್ಲಿ ಮೊದಲ ಸ್ಥಾನ ಪಡೆಯಲೇಬೇಕು ಎಂದು ಸಂಕಲ್ಪದೊಂದಿಗೆ ಅಧ್ಯಯನ ಕೈಗೊಂಡಿದ್ದೆ. ವಿಶ್ವವಿದ್ಯಾಲಯಕ್ಕೇ ಹೆಚ್ಚು ಪದಕಗಳನ್ನು ಪಡೆಯುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ಕೆ.ಸಿ. ತೇಜಸ್ವಿನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿದ್ಯಾರ್ಥಿಗಳೂ ಕಾಲೇಜು ಹಂತದಲ್ಲಿ ಮೊಬೈಲ್ನಿಂದ ಸಾಧ್ಯವಾದಷ್ಟು ದೂರ ಇರಬೇಕು. ಬೇರೆ ಬೇರೆ ವಿಷಯಗಳತ್ತ ಮನಸ್ಸನ್ನು ಹರಿ ಬಿಡದೇ ಹೆಚ್ಚಿನ ಸಮಯವನ್ನು ಓದಿನ ಕಡೆಗೆ ಗಮನ ನೀಡಿದರೆ ಸಾಧನೆ ಮಾಡಲು ಸಾಧ್ಯ’ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.