ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಶಾಸಕ ಎಸ್. ರಾಮಪ್ಪ ಆಸ್ಪತ್ರೆಯ ಎಕ್ಸ್-ರೇ ಮತ್ತು ಡಯಾಲಿಸಿಸ್ ಯಂತ್ರಗಳ ದುಃಸ್ಥಿತಿಯನ್ನು ಕಂಡು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ತಾಲ್ಲೂಕಿನ ಹಾಲಿವಾಣ ಗ್ರಾಮದ ಸಿದ್ಧಪ್ಪ ಅಫಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ತಿಳಿದು ಆರೋಗ್ಯ ವಿಚಾರಣೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಯ ಸಂಬಂಧಿಗಳು ಎಕ್ಸ್–ರೇ ಯಂತ್ರ ದುರಸ್ತಿಯಲ್ಲಿರುವ ಕಾರಣ ಚಿಕಿತ್ಸೆಗೆ ತೊಂದರೆಯಾಗಿದೆ ಎಂದು ದೂರು ಸಲ್ಲಿಸಿದರು.
ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಯಂತ್ರಗಳ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರಿದ ಆಡಳಿತಾಧಿಕಾರಿ ಡಾ.ಎಲ್. ಹನುಮಾನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಡಳಿತಾಧಿಕಾರಿ ಡಾ.ಎಲ್. ಹನುಮಾನಾಯ್ಕ್ ಮಾತನಾಡಿ, ‘ಆಸ್ಪತ್ರೆಗೆ ಅಗತ್ಯ ಉಪಕರಣಗಳ ಬಗ್ಗೆ ಮೇಲಧಿಕಾರಿಗಳಿಗೆ ಪತ್ರದ ಮೂಲಕ ಹಾಗೂ ಸಭೆಯಲ್ಲಿ ಮೌಖಿಕವಾಗಿ ಮಾಹಿತಿ ನೀಡಿದ್ದೇನೆ. ಎಜೆನ್ಸಿಗೆ ಬಾಕಿ ಪಾವತಿ ಹಾಗೂ ಕೋವಿಡ್ ಕಾರಣ ದುರಸ್ತಿ ಕಾರ್ಯ ತಡವಾಗಿದೆ’ ಎಂದು ತಿಳಿಸಿದರು. ಶಾಸಕ ಎಸ್. ರಾಮಪ್ಪ ಎಜೆನ್ಸಿ ಮಾಲೀಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಎಕ್ಸ್–ರೇ ಹಾಗೂ ಡಯಾಲಿಸಿಸ್ ಯಂತ್ರವನ್ನು ದುರಸ್ತಿಗೊಳಿಸುವಂತೆ ಸೂಚಿಸಿದರು.
ಯಂತ್ರ ಡಿಜಿಟಲೀಕರಣವಾಗಿರುವ ಕಾರಣ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಅವಶ್ಯಕತೆ ಇದ್ದು, ಬ್ಯಾಟರಿ ಬೆಂಗಳೂರಿನಿಂದ ಬರಬೇಕಾಗಿರುವುದರಿಂದ ಸ್ವಲ್ಪ ತಡವಾಗಿದೆ ಎಂದು ಎಜೆನ್ಸಿ ಮಾಲೀಕರು ತಿಳಿಸಿದರು.
₹ 24 ಕೋಟಿ ಬಾಕಿ ಇರುವ ಕಾರಣ ಡಯಾಲಿಸಿಸ್ ಯಂತ್ರಗಳ ನಿರ್ವಹಣೆ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಕ್ರಿಯಿಸಿದ ಶಾಸಕರು, ‘ಕೂಡಲೇ ಯಂತ್ರಗಳ ದುರಸ್ತಿ ಕಾರ್ಯ ಆರಂಭಿಸಿ. ನಿಮ್ಮ ಬಾಕಿ ಪಾವತಿ ವಿಚಾರವನ್ನು ಸೋಮವಾರ ಅಧಿವೇಶದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ಹಾಲಿವಾಣ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ. ಮಂಜಪ್ಪ, ಪೂಜಾರ ವಿಜಯಣ್ಣ, ದಂಡೇರ ಚಿಕ್ಕಪ್ಪ, ಕರಡೇರ ಹಾಲೇಶ್, ಬಡಪ್ಪರ ವಿಜಯಪ್ಪ, ಮುಖಂಡರಾದ ಎಸ್.ಜಿ. ಸಂತೋಷ್, ಮಹಾದೇವಪ್ಪ, ಹನುಮಂತಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.