
ದಾವಣಗೆರೆ: ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು. ದೈಹಿಕ ಕಾಯಿಲೆ ಮಾನಸಿಕ ನೆಮ್ಮದಿಯನ್ನು ಕೆಡಿಸಿದರೆ, ಮಾನಸಿಕ ಸಮಸ್ಯೆ ದೇಹದ ಆರೋಗ್ಯವನ್ನು ಹಾಳು ಮಾಡಬಲ್ಲದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ಅಧ್ಯಕ್ಷರೂ ಆಗಿರುವ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಅಭಿಪ್ರಾಯಪಟ್ಟರು.
ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
‘ಒಬ್ಬ ಮಾನಸಿಕ ರೋಗಿ ಇದ್ದರೆ ಕುಟುಂಬದ ಪರಿಸ್ಥಿತಿ ಹದಗೆಡುತ್ತದೆ. ಮನೆಯ ಇತರ ಸದಸ್ಯರ ದುಡಿಮೆಯ ಮೇಲೂ ಪರಿಣಾಮ ಬೀರುತ್ತದೆ. ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಮೌನವಾಗಿ ಹಲವು ಸಂಕಟಗಳಿಗೆ ತುತ್ತಾಗುತ್ತಾರೆ. ಇದರಿಂದ ಇಡಿ ಸಮಾಜ ನೋವಿಗೆ ಒಳಗಾಗುತ್ತದೆ’ ಎಂದು ಹೇಳಿದರು.
‘ಆರೋಗ್ಯವಂತರು ಇದ್ದಾಗ ಸಮಾಜವೂ ಚೆನ್ನಾಗಿರುತ್ತದೆ. ಸ್ವಾವಲಂಬಿ, ಸಂತೋಷ, ತೃಪ್ತಿಕರವಾಗಿರುವುದೇ ಮಾನಸಿಕ ಆರೋಗ್ಯ. ಮನಸ್ಸು ಸ್ವಚ್ಛವಾಗಿದ್ದರೆ ಆರೋಗ್ಯವಂತರಾಗಿರಲು ಸಾಧ್ಯ’ ಎಂದರು.
‘ಮಾನಸಿಕ ಅಸ್ವಸ್ಥತೆವುಳ್ಳ ವ್ಯಕ್ತಿ ತಿರುಗಾಡುತ್ತಿದ್ದರೆ ರಕ್ಷಣೆಗಾಗಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ಆ ವ್ಯಕ್ತಿಗೆ ಅಥವಾ ಮಂಡಳಿಯ ಪ್ರತಿನಿಧಿಗೆ ನೀಡಬೇಕು. ರಕ್ಷಣೆ ಮಾಡಿದ ವ್ಯಕ್ತಿಯನ್ನು ಪೊಲೀಸ್ ಲಾಕ್ಆಪ್ ಅಥವಾ ಜೈಲಿನಲ್ಲಿ ಇಡಬಾರದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಕರೆಣ್ಣನವರ ಹೇಳಿದರು.
ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ ಎಲ್. ಪಾಟೀಲ, ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ನಾಗವೇಣಿ, ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ.ಮರುಳಸಿದ್ದಪ್ಪ.ಪಿ.ಎಂ, ಮನೋರೋಗ ವಿಭಾಗದ ಡಾ.ಅನುಪಮ, ಡಾ.ಮೃತ್ಯುಂಜಯ, ವೈದ್ಯಾಧಿಕಾರಿ ಡಾ.ಸುಧೀಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ಸದಸ್ಯರಾದ ಬಿ.ನಾಗಮ್ಮ, ಶಂಕರಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.