ADVERTISEMENT

ಹರಿಹರ | ಬಿಸಿಎಂ ಹಾಸ್ಟೆಲ್‌ ವಾರ್ಡನ್‌ಗೆ ಶಾಸಕ ಬಿ.ಪಿ.ಹರೀಶ್ ತರಾಟೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 14:56 IST
Last Updated 12 ಆಗಸ್ಟ್ 2023, 14:56 IST
ಹರಿಹರದ ಗುತ್ತೂರಿನಲ್ಲಿರುವ ಬಿಸಿಎಂ ಮೆಟ್ರಿಕ್ ನಂತರದ ಹಾಸ್ಟೆಲ್‌ಗೆ ಶಾಸಕ ಬಿ.ಪಿ.ಹರೀಶ್ ಶನಿವಾರ ಭೇಟಿ ನೀಡಿದರು. ಗಾಯತ್ರಿ ಕೆ.ಎಚ್., ನುಸ್ರತ್ ಪರ್ವಿನ್ ಇದ್ದರು
ಹರಿಹರದ ಗುತ್ತೂರಿನಲ್ಲಿರುವ ಬಿಸಿಎಂ ಮೆಟ್ರಿಕ್ ನಂತರದ ಹಾಸ್ಟೆಲ್‌ಗೆ ಶಾಸಕ ಬಿ.ಪಿ.ಹರೀಶ್ ಶನಿವಾರ ಭೇಟಿ ನೀಡಿದರು. ಗಾಯತ್ರಿ ಕೆ.ಎಚ್., ನುಸ್ರತ್ ಪರ್ವಿನ್ ಇದ್ದರು   

ಹರಿಹರ: ಶಾಸಕ ಬಿ.ಪಿ.ಹರೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಾಯತ್ರಿ ಕೆ.ಎಚ್ ಹಾಗೂ ಇಲಾಖೆಯ ತಾಲ್ಲೂಕು ಅಧಿಕಾರಿ ನುಸ್ರತ್ ಪರ್ವಿನ್ ಅವರು ಶನಿವಾರ ಬೆಳಿಗ್ಗೆ ನಗರದ ಗುತ್ತೂರಿನಲ್ಲಿರುವ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರು ಹಾಸ್ಟೆಲ್‌ಗೆ ಶುಕ್ರವಾರ ದಿಢೀರ್ ಭೇಟಿ ನೀಡಿದಾಗ, ಅಲ್ಲಿನ ನ್ಯೂನತೆಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದರು. ಸರ್ಕಾರ ನಿಗದಿಪಡಿಸಿದ ರೀತಿ ವಿದ್ಯಾರ್ಥಿಗಳಿಗೆ ಊಟ ನೀಡುತ್ತಿಲ್ಲ ಎಂದು ವಾರ್ಡನ್ ಜಿ.ಕೆ ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಶಾಸಕರಿಗೆ ದೂರು ನೀಡಿದ್ದರಿಂದ ಕೋಪಗೊಂಡಿದ್ದ ವಾರ್ಡನ್, ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್ನಲಾಗಿದ್ದು, ಇದರ ಆಡಿಯೊವನ್ನು ಶಾಸಕರು ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಿದ್ಯಾರ್ಥಿಗಳು ಕಳಿಸಿದ್ದರು. 

ADVERTISEMENT

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಶನಿವಾರ ಮತ್ತೆ ಹಾಸ್ಟೆಲ್‌ಗೆ ಭೇಟಿ ನೀಡಿದ ಶಾಸಕ ಹರೀಶ್, ವಾರ್ಡನ್ ಕುಮಾರ್‌ ಜತೆ ಮಾತನಾಡಿದರು. 

‘ವಾರ್ಡನ್ ತಮ್ಮ ತಪ್ಪು ತಿದ್ದಿಕೊಂಡು ಸರ್ಕಾರದ ನಿಯಮಾನುಸಾರ ಮಕ್ಕಳಿಗೆ ಊಟ ಒದಗಿಸಬೇಕು. ಮತ್ತೆ ಈ ತರಹದ ನ್ಯೂನತೆ ಮರುಕಳಿಸದಂತೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಿಗಾ ಇರಿಸಬೇಕು. ಆಗಾಗ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು’ ಎಂದು ಶಾಸಕರು ತಾಕೀತು ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.