ADVERTISEMENT

ಕಾಂಗ್ರೆಸ್ ವಾರ್ಡ್‌ಗಳಿಗೆ ಹೆಚ್ಚು ಅನುದಾನ ಮೀಸಲು

ವಿರೋಧ ಪಕ್ಷಗಳ ಆರೋಪಕ್ಕೆ ಮೇಯರ್ ಬಿ.ಜೆ. ಅಜಯಕುಮಾರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 15:23 IST
Last Updated 8 ಜುಲೈ 2020, 15:23 IST
ಬಿ.ಜಿ.ಅಜಯ್‌ಕುಮಾರ್
ಬಿ.ಜಿ.ಅಜಯ್‌ಕುಮಾರ್   

ದಾವಣಗೆರೆ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬಿಜೆಪಿಗಿಂತ ಕಾಂಗ್ರೆಸ್‌ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯಕುಮಾರ್ ಸ್ಪಷ್ಟಪಡಿಸಿದರು.

‘ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ವಾರ್ಡ್‌ ನಂ.5, 16, 36ನೇ ವಾರ್ಡ್‌ಗಳಿಗೆ ಅನುದಾನ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದ್ದು, ಇದು ದಾರಿ ತಪ್ಪಿಸುವ ಕೆಲಸ. ವಾರ್ಡ್‌ ನಂ. 5ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ₹50 ಕೋಟಿಗೂ ಹೆಚ್ಚು ಕಾಮಗಾರಿಗಳು ನಡೆಯುತ್ತಿವೆ. ವಾರ್ಡ್‌ ನಂ.16ರಲ್ಲಿ ₹16 ಲಕ್ಷ, 36ರಲ್ಲಿ ₹ 50 ಲಕ್ಷದ ಕಾಮಗಾರಿಗಳನ್ನು ಸೇರಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಶಾಸಕ ಎಸ್‌.ಎ. ರವೀಂದ್ರನಾಥ ಅವರ ಪುತ್ರಿ ವೀಣಾ ನಂಜಪ್ಪ ಅವರ ವಾರ್ಡ್‌ಗಿಂತ ಕಾಂಗ್ರೆಸ್‌ನ ಜಿ.ಡಿ. ಪ್ರಕಾಶ್ ಅವರು ಪ್ರತಿನಿಧಿಸಿರುವ 1ನೇ ವಾರ್ಡ್‌ಗೆ ₹5.50 ಕೋಟಿ ಮೀಸಲಿರಿಸಲಾಗಿದೆ. ಅದೇ ರೀತಿ ಕಾಂಗ್ರೆಸ್‌ನವರು ಪ್ರತಿನಿಧಿಸಿರುವ 43ನೇ ವಾರ್ಡ್‌ಗೆ ₹ 2.50 ಕೋಟಿ, 35ನೇ ವಾರ್ಡ್‌ಗೆ ₹ 2ಕೋಟಿ, 37ನೇ ವಾರ್ಡ್‌ಗೆ ₹2.50 ಕೋಟಿ, ದೇವರಮನಿ ಶಿವಕುಮಾರ್‌ ಅವರು ಪ್ರತಿನಿಧಿಸುವ 22ನೇ ವಾರ್ಡ್‌ಗೆ ₹ 1ಕೋಟಿ, ವಾರ್ಡ್‌ ನಂ 28ಕ್ಕೆ ₹ 2.7ಕೋಟಿ ಸೇರಿ ₹12.50 ಕೋಟಿ ಹಂಚಿಕೆ ಮಾಡಿದರೆ, ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ₹ 9.90 ಕೋಟಿ ಅನುದಾನ ಮೀಸಲಿರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಗರ ವಿಕಾಸ ಯೋಜನೆಯು 2019ರ ಮಾರ್ಚ್‌ನ ಆಯವ್ಯಯದಲ್ಲಿ ಘೋಷಣೆಯಾಗಿದ್ದು, ಅಂದೇ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ಆಗ ಕಾಂಗ್ರೆಸ್ ಸರ್ಕಾರವಿದ್ದರೂ ಅದನ್ನು ಮಾಡಿಲ್ಲ. ಇದು ಕಾಂಗ್ರೆಸ್‌ನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ₹600 ಕೋಟಿ ನೀಡಿರುವುದರಿಂದ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ನಗರ ವಿಕಾಸ ಯೋಜನೆಯಡಿ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ’ ಎಂದು ಹೇಳಿದರು.

‘ದಾವಣಗೆರೆ ಎಂದರೆ ದಕ್ಷಿಣ, ಉತ್ತರ ಎಂಬ ಬೇಧವಿಲ್ಲ. ಎಲ್ಲರೂ ಒಂದೇ. ಅಭಿವೃದ್ಧಿ ಮಾಡುವುದರ ಬಗ್ಗೆ ಗಮನಹರಿಸಬೇಕು. ಅದು ಬಿಟ್ಟು ತಪ್ಪು ಮಾಹಿತಿ ನೀಡಿ ಜನರಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ನಿಲ್ಲಿಸಬೇಕು. ದಾವಣಗೆರೆ ಹೊರವಲಯಗಳಾದ ಎಸ್‌.ಎಸ್. ಬಡಾವಣೆ, ಕುಂದವಾಡ, ಆಂಜನೇಯ ಬಡಾವಣೆ, ಭೂಮಿಕಾ ನಗರ, ಸರಸ್ವತಿ ನಗರ, ಶಿವಕುಮಾರ ಸ್ವಾಮಿ ಬಡಾವಣೆ, ಆವರಗೆರೆಗಳು ಕಾಂಗ್ರೆಸ್ ಆಡಳಿತದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅತಿ ಜರೂರಾಗಿ ಆಗಬೇಕಾದ ಕಾರ್ಯಗಳನ್ನು ಸೇರಿಸಿದ್ದಾರೆ’ ಎಂದರು.

ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷರ ಸಮಿತಿಯಲ್ಲಿ ಇದು ನಿರ್ಧಾರವಾಗಲಿದ್ದು, ಶಾಸಕರು ಗೈರು ಹಾಜರಾಗಿ ಈಗ ಸೇರಿಸಬೇಕು ಎಂದರೆ ಕಾನೂನಿನಲ್ಲಿ ಅವಕಾಶವಿಲ್ಲ. ಬೇರೆ ಪಾಲಿಕೆಗಳಲ್ಲಿ ಟೆಂಡರ್ ಕರೆದಿದ್ದು, ಒಂದು ವರ್ಷವಾದರೂ ನಾವು ಕ್ರಿಯಾ ಯೋಜನೆಯನ್ನೇ ಅಂತಿಮ ಮಾಡಿರಲಿಲ್ಲ. ಆದ್ದರಿಂದ ಉಸ್ತುವಾರಿ ಸಚಿವರು ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

ನಗರಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಟಿ. ವೀರೇಶ್ ಮಾತನಾಡಿ, ‘ನಾವೆಲ್ಲರೂ ಆಯ್ಕೆಯಾಗಿರುವುದು ಕೆಸರೆರಾಟ ಮಾಡುವ ರಾಜಕೀಯಕ್ಕಾಗಿ ಅಲ್ಲ. ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಎಲ್ಲರೂ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ನಗರ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಿ’ ಎಂದು ಸಲಹೆ ನೀಡಿದರು.

ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಸೋಗಿ ಶಿವಕುಮಾರ್, ಜಯಮ್ಮ ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.