ADVERTISEMENT

ವಿದೇಶಿ ಬಂಡವಾಳದ ವಿರುದ್ಧ ಚಳವಳಿ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 15:04 IST
Last Updated 8 ಜೂನ್ 2020, 15:04 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ದಾವಣಗೆರೆ: ದೇಶದ ಎಲ್ಲ ಕ್ಷೇತ್ರಗಳನ್ನು ವಿದೇಶೀಯರು ಬಂಡವಾಳ ಹೂಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಇದರ ವಿರುದ್ಧ ಎರಡನೇ ಸ್ವಾತಂತ್ರ್ಯ ಚಳವಳಿಯನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಡೆಸಲು ಸೋಮವಾರ ನಗರದಲ್ಲಿ ನಡೆದ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದೇಶದ ಹಿತಕಾಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಕೊರೊನಾ ಸಂದರ್ಭದಲ್ಲಿ ರೈತರನ್ನು ಕಾಪಾಡಿಲ್ಲ. ಎಲ್ಲ ನಗರ ಪ್ರದೇಶದಲ್ಲಿ ಇದ್ದಂತಹ ಕೂಲಿ, ಕಾರ್ಮಿಕರಿಗೆ ಸ್ಪಂದಿಸಿಲ್ಲ. ಯಾರೋ ದೆಹಲಿಯಿಂದ ಅಹಮದಬಾದ್‌ನಲ್ಲಿರುವ ಕುಟುಂಬವನ್ನು ಕರೆದುಕೊಂಡು ಹೋಗಲಿಕ್ಕೆ ಒಂದು ಪುಟ್ಟು ವಿಮಾನ ನೀಡಿದ್ದಿರಿ. ಆದರೆ, ಸಾಮಾನ್ಯ ಜನ ಪ್ರಯಾಣ ಮಾಡುವಂತಹ ರೈಲು ಸಕಾಲದಲ್ಲಿ ಸಂಚರಿಸದೇ ಜನ ಅನ್ನ, ಆಹಾರ ಇಲ್ಲದೇ ನರಳಿದರು ಎಂದರು.

ADVERTISEMENT

ಕೊರೊನಾದ ನೆಪವೊಡ್ಡಿ ದೇಶವನ್ನು ಪರಕೀಯ ವಿದೇಶಿ ಕಂಪೆನಿಗಳಿಗೆ ಹಣ ಹೆಕ್ಕುವಂತಹ ಕೆಲಸ ಮಾಡುತ್ತಿದ್ದಾರೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯಲ್ಲಿ ಕಾರ್ಪೊರೇಟ್ ಮತ್ತು ಎನ್‌ಎಂಸಿ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದರು.

ಕೃಷಿ ಪ್ರವೇಶದ ನಂತರ ಕೃಷಿ ಮಾರುಕಟ್ಟೆಯನ್ನು ಪ್ರವೇಶ ಮಾಡಲಿಕ್ಕೆ ಎಪಿಎಂಸಿ ಕಾಯ್ದೆ ಕಾಲಂ ೮ನ್ನು ಬದಲಾವಣೆ ಮಾಡುವ ಮೂಲಕ ಕಂಪೆನಿಗಳಿಗೆ ಎಪಿಎಂಸಿಯ ಕಾಯ್ದೆ, ಕಾನೂನು ಪಾಲನೆ ಮಾಡುವ ಅವಶ್ಯಕತೆ ಇಲ್ಲದ ರೀತಿ ಮತ್ತು ಖಾಸಗಿ ಮಾರುಕಟ್ಟೆ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ರೈತರದ್ದೆ ಆದ ಸಂಸ್ಥೆ ಎಪಿಎಂಸಿಯಲ್ಲಿ ಸಂಪೂರ್ಣ ಬಾಗಿಲು ಮುಚ್ಚಿ ಕಂಪೆನಿಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್ ತಿದ್ದುಪಡಿ ಮಸೂದೆ. ಲಾಕ್‌ಡೌನ್ ಘೋಷಣೆಯಿಂದ ರೈತರು ಅನುಭವಿಸಿದ ನಷ್ಟ ಸೇರಿದಂತೆ ಮತ್ತಿತರರೇ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.