ADVERTISEMENT

‘ನಾಯಕತ್ವ ವಿರುದ್ಧದ ಹೇಳಿಕೆಗೆ ಕಡಿವಾಣ’–ಎಂ.ಪಿ. ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 14:49 IST
Last Updated 1 ಜನವರಿ 2021, 14:49 IST
 ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ‘ಪಕ್ಷದ ನಾಯಕತ್ವ ಮತ್ತು ಮುಖಂಡರ ವಿರುದ್ಧದ ಹೇಳಿಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ ಮಾತ್ರಕ್ಕೆ ಬಿಎಸ್‌ವೈ ವರ್ಚಸ್ಸಿಗೆ ಧಕ್ಕೆಯಾಗಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಟವೆಲ್ ಹಾಕಿದರೆ ನಡೆಯೋದಿಲ್ಲ’ ಎಂದು ಕಿಡಿಕಾರಿದರು.

ಪಕ್ಷದ ಸಂಘಟನೆ ಮತ್ತು ಸರ್ಕಾರ ಒಂದಾಗಿ ಹೋಗಬೇಕು. ಸ್ವಪಕ್ಷೀಯರು ಅಭಿವೃದ್ಧಿ ವಿಚಾರಗಳಿದ್ದರೆ ಚರ್ಚೆ ಮಾಡಲಿ. ಆದರೆ ಬೀದಿಯಲ್ಲಿ ಮಾತನಾಡುವುದು, ಬಹಿರಂಗ ಪತ್ರ ಬರೆಯವುದು ಸರಿಯಲ್ಲ ಎಂದು ಕುಟುಕಿದರು.

ADVERTISEMENT

‌ನಾಯಕತ್ವದ ಬಗ್ಗೆ ಅಪಸ್ವರ ಎತ್ತದಂತೆ ಬೆಳಗಾವಿ ಕೋರ್ ಕಮಿಟಿಯಲ್ಲಿ ವರಿಷ್ಠರೇ ಸೂಚಿಸಿದ್ದರೂ ಗೊಂದಲ ಸೃಷ್ಟಿಸಲಾಗುತ್ತಿದೆ. ಇದನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಯಡಿಯೂರಪ್ಪ ಅವರೇ ಎರಡು ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ ಎಂದು ಹೇಳಿದರು.

ಉಜಿರೆಯಲ್ಲಿ ಪಾಕಿಸ್ತಾನ ಪರ ಜಯಘೋಷ ಹಾಕಿದ ಎಸ್‌ಡಿಪಿಐ ಸಂಘಟನೆಯನ್ನು ಸರ್ಕಾರ ನಿಷೇಧಿಸುವುದು ನಿಶ್ಚಿತ. ಸಂಘಟನೆಯ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ‘ಟಿಪ್ಪು ಸುಲ್ತಾನ್, ಗೋಹತ್ಯೆ ನಿಷೇದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಮುಖಂಡರು ಇಂತಹ ವಿಷಯಗಳ ಬಗ್ಗೆ ಏಕೆ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.