ದಾವಣಗೆರೆ: ಸಿಎಎ, ಎನ್ಆರ್ಸಿ, ಎನ್ಪಿಆರ್ ಅನ್ನು ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಹಾ ಸುಳ್ಳುಗಾರರು. ಹಾಗಾಗಿ ಅವರ ಮಾತುಗಳನ್ನು ನಂಬಬೇಡಿ. ವಾಪಸ್ ತೆಗೆದುಕೊಳ್ಳುವವರೆಗೆ ಹೋರಾಟ ಕೈಬಿಡಬಾರದು ಎಂದು ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಹೇಳಿದರು.
ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ‘ನಾವು ಭಾರತೀಯರು’ ಎಂಬ ಹೆಸರಲ್ಲಿ ಇಮಾಮ್ ಅಹ್ಮದ್ ರಜಾ ಪಾರ್ಕ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ನಾಲ್ಕನೇ ದಿನವಾದ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು.
ಹೋರಾಟ ಮಾಡುವವರನ್ನು ಗುಂಡಿಟ್ಟು ಕೊಲ್ಲಿ ಎಂದು ಕೇಂದ್ರದ ಒಬ್ಬ ಸಚಿವ ಹೇಳುತ್ತಾರೆ. ಮಹಾತ್ಮ ಗಾಂಧೀಜಿ ಅವರ ಪ್ರಾಮಾಣಿಕ ಹೋರಾಟಕ್ಕೆ ಕರ್ನಾಟಕ ಒಬ್ಬ ಸಂಸದ ಅವಮಾನ ಮಾಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಚಳವಳಿಗೆ ಯಾವುದೇ ಕೊಡುಗೆ ನೀಡದ ಆರ್ಎಸ್ಎಸ್ಗೆ ಬ್ರಿಟಿಷರ ಚಮಚಾಗಿರಿ ಮಾಡಿದ ಇತಿಹಾಸ ಮಾತ್ರ ಇದೆ. ಅವರು ಈಗ ಇಂಥ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ, ಎನ್ಪಿಆರ್ನಿಂದ ಮುಸ್ಲಿಮರಿಗಷ್ಟೇ ತೊಂದರೆಯಲ್ಲ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೂ ತೊಂದರೆಯಾಗುತ್ತದೆ. ನಾವೆಲ್ಲ ಬಡವರ, ಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ ಪರ ಹೋರಾಟವನ್ನು ಮಾಡಬೇಕಾಗಿದೆ ಎಂದರು.
ಯುವಜನರಿಗೆ ಉದ್ಯೋಗವಿಲ್ಲ. ಬಡವರಿಗೆ ಮನೆ ಇಲ್ಲ. ಆರೋಗ್ಯ, ಶಿಕ್ಷಣ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಾ ದೇಶವನ್ನು ದಿವಾಳಿ ಮಾಡುತ್ತಿದೆ. ಪ್ರಧಾನಮಂತ್ರಿ ಮೋದಿ ಅವರು ಅಣ್ಣ, ಅಕ್ಕ ಎಂದು ಭಾಷಣ ಮಾಡಿದರೆ ಹೊಟ್ಟೆ ತುಂಬುವುದಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಹಮ್ಮದ್ ರಿಯಾಜ್ ರಜ್ವಿ, ಅಬ್ದುಲ್ ಖಾದರ್, ಅಬ್ದುಲ್ ಘನಿ, ಅಸ್ಗರ್, ಜಬೀನಾಖಾನಂ, ಕರಿಬಸಪ್ಪ, ಜಬೀನಾ ಅಫಾ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.