ADVERTISEMENT

ದಾವಣಗೆರೆ | 5 ಸಾವಿರ ದಾಟಿದ ಸೋಂಕಿತರ ಸಂಖ್ಯೆ

327 ಮಂದಿಗೆ ಕೊರೊನಾ * 267 ಮಂದಿ ಬಿಡುಗಡೆ * ಐವರು ವೃದ್ಧರ ಸಾವು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 16:25 IST
Last Updated 15 ಆಗಸ್ಟ್ 2020, 16:25 IST
ಮಲೇಬೆನ್ನೂರು ಪಟ್ಟಣದ ಕಲ್ಲೇಶ್ವರ ದೇವಾಲಯದ ಬಳಿ ಶನಿವಾರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಯಿತು
ಮಲೇಬೆನ್ನೂರು ಪಟ್ಟಣದ ಕಲ್ಲೇಶ್ವರ ದೇವಾಲಯದ ಬಳಿ ಶನಿವಾರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಯಿತು   

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಶನಿವಾರ ಒಂದೇ ದಿನ 327 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ.

ನಿಟುವಳ್ಳಿಯ 65 ವರ್ಷದ ವೃದ್ಧ ಶ್ವಾಸಕೋಶದ ಕಾಯಿಲೆ, ಹೃದಯದ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಆ.13ರಂದು ಮೃತಪಟ್ಟಿದ್ದಾರೆ. ಕೆಟಿಜೆ ನಗರದ 63 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಆ.14ರಂದು ಮೃತಪಟ್ಟರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ 70 ವರ್ಷದ ವೃದ್ಧ ಕ್ಷಯ ಮತ್ತು ಮಧುಮೇಹದಿಂದ ಆ.13ರಂದು ಅಸುನೀಗಿದರು. ಹರಿಹರ ಹರ್ಲಾಪುರದ 65 ವರ್ಷದ ವೃದ್ಧ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದ ಸಮಸ್ಯೆಯಿ ಆ.14ರಂದು ನಿಧನರಾದರು. ವಿನೋಬನಗರದ 78 ವರ್ಷದ ವೃದ್ಧ ಹೃದಯದ ಸಮಸ್ಯೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಮೃತಪಟ್ಟರು. ಈ ಐವರಿಗೂ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಎಲ್ಲರಿಗೂ ಕೊರೊನಾ ಪಾಸಿಟಿವ್ ಆಗಿತ್ತು.

327 ಮಂದಿಗೆ ಸೋಂಕು: 27 ವೃದ್ಧರು, 26 ವೃದ್ಧೆಯರು, 10 ಬಾಲಕರು, 17 ಬಾಲಕಿಯರಿಗೆ ಕೊರೊನಾ ಬಂದಿದೆ. 18ರಿಂದ 59 ವರ್ಷದೊಳಗಿನ 135 ಪುರುಷರಿಗೆ, 112 ಮಹಿಳೆಯರಿಗೆ ಸೋಂಕು ತಗುಲಿದೆ.

ADVERTISEMENT

ಎಂದಿನಂತೆ ದಾವಣಗೆರೆ ತಾಲ್ಲೂಕಿನಲ್ಲೇ ಅಧಿಕ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ ಆಲೂರಿನ ಮೂವರು, ಆನಗೋಡಿನ ಇಬ್ಬರು, ಗಿರಿಯಾಪುರದ ಇಬ್ಬರು, ದೊಡ್ಡಬಾತಿ, ಊರನಾಯಕನಗಲ್ಲಿ, ಅತ್ತಿಗೆರೆ, ಕಕ್ಕರಗೊಲ್ಲ ಹೀಗೆ 11 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 171 ಮಂದಿಗೆ ಸೋಂಕು ತಗುಲಿದೆ.

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 12 ಮಂದಿಗೆ ವೈರಸ್‌ ತಗುಲಿದೆ. ನಿಟುವಳ್ಳಿ, ವಿನೋಬನಗರಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿವೆ. ಎಂಸಿಸಿ ‘ಎ’ ಬ್ಲಾಕ್‌, ಎಂಸಿಸಿ ‘ಬಿ’ ಬ್ಲಾಕ್‌, ಕೆಟಿಜೆನಗರ, ದೇವರಾಜ ಅರಸು ಬಡಾವಣೆ, ಶಾಮನೂರು, ಆಂಜನೇಯ ಬಡಾವಣೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಖಚಿತಗೊಂಡಿವೆ.

ಹರಿಹರದ 73 ಮಂದಿಗೆ ಕೊರೊನಾ ಬಂದಿದ್ದು, ಎರಡನೇ ಅತಿ ಹೆಚ್ಚು ಪ್ರಕರಣಗಳಿರುವ ತಾಲ್ಲೂಕು ಇದಾಗಿದೆ. ಚನ್ನಗಿರಿ ತಾಲ್ಲೂಕಿನ 26, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 26, ಜಗಳೂರು ತಾಲ್ಲೂಕಿನ 7 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರದುರ್ಗ ಜಿಲ್ಲೆಯ 9 ಮಂದಿ, ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಇಬ್ಬರಿಗೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಧಾರವಾಡದ ಒಬ್ಬರಿಗೆ ಸೋಂಕು ಇರುವುದು ಖಚಿತಪಟ್ಟಿದೆ.

267 ಬಿಡುಗಡೆ: 18 ಮಂದಿ ವೃದ್ಧರು, 23 ವೃದ್ಧೆಯರು, 14 ಬಾಲಕರು, 13 ಬಾಲಕಿಯರು ಸೇರಿ 267 ಮಂದಿ ಶನಿವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 5070 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 3421 ಮಂದಿ ಗುಣಮುಖರಾಗಿದ್ದಾರೆ. 126 ಮಂದಿ ಮೃತಪಟ್ಟಿದ್ದಾರೆ. 1573 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.