ದಾವಣಗೆರೆ: ಬಂಡಾಯ ಸಾಹಿತ್ಯ ಸಂಘಟನೆ ಆಶ್ರಯದಲ್ಲಿ ಸೆಪ್ಟೆಂಬರ್ 26ರಂದು ಬೆಳಿಗ್ಗೆ 11ರಿಂದ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ಒಳನೋಟ’ ವಿಷಯದ ಕುರಿತು ರಾಷ್ಟ್ರ ಮಟ್ಟದ ಆನ್ಲೈನ್ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ, ‘ಸಮ ಸಮಾಜ ನಿರ್ಮಾಣಕ್ಕೆ ಅಕ್ಷರವೇ ಆಶಾ ಕಿರಣ. ಬಹು ಸಮುದಾಯ ಹಾಗೂ ಬಹು ಸಂಸ್ಕೃತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಷ್ಟರಮಟ್ಟಿಗೆ ಪೂರಕವಾಗಲಿದೆ ಎಂಬ ಬಗ್ಗೆ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುವುದು. ನೀತಿಯ ಸಾಮಾಜಿಕ ನ್ಯಾಯದ ಪರವಾಗಿರಬೇಕು ಎಂಬುದು ಸಂಘಟನೆಯ ಆಶಯವಾಗಿದೆ’ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಆರಂಭಿಕ ಮಾತುಗಳನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಆಡಲಿದ್ದಾರೆ. ಶಾಲಾ ಶಿಕ್ಷಣ ಕುರಿತು ಪ್ರಾಧ್ಯಾಪಕ ಶ್ರೀಪಾದ ಭಟ್, ಉನ್ನತ ಶಿಕ್ಷಣ ಕುರಿತು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಮಾತನಾಡಲಿದ್ದಾರೆ. ಚರ್ಚೆಯಲ್ಲಿ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಅಲ್ಲಮಪ್ರಭು ಬೆಟದೂರು, ಸಿದ್ಧನಗೌಡ ಪಾಟೀಲ, ಕೆ.ಶರೀಫ್, ಆರ್.ಜಿ. ಹಳ್ಳಿ ನಾಗರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಆಸಕ್ತರು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡರೆ ಅವರಿಗೆ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಲಿಂಕ್ ಕಳುಹಿಸಲಾಗುವುದು. ಮಾಹಿತಿಗೆ ತಮ್ಮನ್ನು (ಮೊ: 9448786953) ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇನ್ನೊಬ್ಬ ಜಿಲ್ಲಾ ಸಂಚಾಲಕ ಬಿ.ಎನ್. ಮಲ್ಲೇಶ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.