
ತ್ಯಾವಣಿಗೆ: ರೈತರು ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ, ಚಾನಲ್ ಏರಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುವ ಬದಲು ಅದನ್ನು ಬಳಸಿಕೊಂಡು ಪೌಷ್ಠಿಕಾಂಶಯುಕ್ತ ಗೊಬ್ಬರ ತಯಾರಿಸಬಹುದು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಟಿ.ಎನ್. ಹೇಳಿದರು.
ಸಮೀಪದ ಕತಲಗೆರೆಯ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಘಟಕದ ವತಿಯಿಂದ ಗುರವಾರ ಹಮ್ಮಿಕೊಂಡಿದ್ದ ‘ಅಡಿಕೆ ಸಿಪ್ಪೆಯಿಂದ ಉತ್ಕೃಷ್ಟ ಕಾಂಪೋಸ್ಟ್ ಗೊಬ್ಬರ ತಯಾರಿಕೆ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡಿಕೆ ತೋಟಗಳಿಗೆ ದುಬಾರಿ ರಾಸಾಯನಿಕ ಗೊಬ್ಬರ ಬಳಸುವ ಬದಲು ಅಡಿಕೆ ಸಿಪ್ಪೆ ಬಳಸಿ ಕಾಂಪೋಸ್ಟ್ ಗೊಬ್ಬರ ಹಾಕಬಹುದು. ತೋಟಕ್ಕೆ ಅಗತ್ಯ ಪೋಷಕಾಂಶವಿರುವ ಸಾವಯವ ಗೊಬ್ಬರವನ್ನು ಸ್ವತಃ ರೈತರೇ ತಯಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ವಿಧಾನ: 20 ಅಡಿ ಉದ್ದ 5 ರಿಂದ 6 ಅಡಿ ಅಗಲ 5 ಅಡಿ ಆಳದ ತೊಟ್ಟಿಯನ್ನು ನಿರ್ಮಿಸಿ ಒಣಗಿದ ಅಡಿಕೆ ಸಿಪ್ಪೆ ಮತ್ತು ಇತರೆ ತ್ಯಾಜ್ಯವನ್ನು ಅದರಲ್ಲಿ ಹಾಕಬೇಕು. 10 ಕೆ.ಜಿ. ಕಾಂಪೋಸ್ಟ್ ಕಲ್ಚರ್, 10 ಕೆ.ಜಿ. ಎರೆಹುಳು ಹಾಗೂ ಕೆಂಪು ಮಣ್ಣು ಸೇರಿಸಿ ಪುನಃ ಅಡಿಕೆ ಸಿಪ್ಪೆಯನ್ನು ತುಂಬಬೇಕು. ದನದ ಸಗಣಿ ಹಾಕಿ ಸಿಪ್ಪೆ ಭರ್ತಿ ಮಾಡಿದ ನಂತರ ನೀರಿನ ಹದ ಕಡಿಮೆಯಾಗದಂತೆ ನೀರನ್ನು ಪ್ರತಿ ದಿನ ಕೊಡಬೇಕು. ಸೂರ್ಯನ ಕಿರಣ ನೇರವಾಗಿ ಬೀಳದಂತೆ ಚಪ್ಪರ ಹಾಕಿ 2 ತಿಂಗಳಿಗೊಮ್ಮೆ ಮೇಲಿಂದ ಕೆಳಗೆ ಮಗುಚಿ ಹಾಕುತ್ತಿದ್ದರೆ, 6 ತಿಂಗಳಲ್ಲಿ ಉತ್ಕೃಷ್ಟ ಕಾಂಪೋಸ್ಟ್ ಗೊಬ್ಬರವಾಗಿ ಅದು ಮಾರ್ಪಾಡಾಗುತ್ತದೆ ಎಂದು ವಿವರಿಸಿದರು.
ತರಬೇತಿಯಲ್ಲಿ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಕೇಂದ್ರದ ಮುಖ್ಯಸ್ಥ ಬಿ.ಎಂ. ಆನಂದಕುಮಾರ್ ಮಾತನಾಡಿದರು. ವಿಸ್ತರಣಾ ಘಟಕದ ಮುಖ್ಯಸ್ಥ ಗಂಗಪ್ಪಗೌಡ ಬಿರಾದರ್, ಮಣ್ಣು ವಿಜ್ಞಾನಿಗಳಾದ ಸರ್ವಜ್ಞ ಬಿ. ಸಾಲಿಮಠ, ಪ್ರಶಾಂತ್ ಡಿ.ವಿ., ಪ್ರವೀಣ್ ಬಿರಾದಾರ, ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.