ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಶನಿವಾರ ಮುಕ್ತಾಯಗೊಂಡಿದೆ. ಪುರುಷರ ವಿಭಾಗದಲ್ಲಿ ಡಿಎಆರ್ ಎ.ಪಿ. ಜಯಣ್ಣ, ನಗರ ಉಪ ವಿಭಾಗದ ಸಿಪಿಸಿ ಮಹಾಂತೇಶ ಬಿದರಿ, ಮಹಿಳಾ ವಿಭಾಗದಲ್ಲಿ ಆರ್ಎಂಸಿ ಠಾಣೆಯ ಎಲ್.ಸರಸ್ವತಿ ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಪ್ರಶಸ್ತಿಯನ್ನು ಜಿಲ್ಲಾ ಸಶಸ್ತ್ರ ಪಡೆ (ಡಿಎಆರ್) ತನ್ನದಾಗಿಸಿಕೊಂಡಿದೆ.
3 ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ ಮೀಸಲು ಪಡೆ ತಂಡ, ದಾವಣಗೆರೆ ನಗರ ಉಪ ವಿಭಾಗ ತಂಡ, ದಾವಣಗೆರೆ ಗ್ರಾಮಾಂತರ ಉಪ ವಿಭಾಗ ತಂಡ, ಚನ್ನಗಿರಿ ಉಪ ವಿಭಾಗ ತಂಡ, ಜಿಲ್ಲಾ ಮಹಿಳಾ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಹಗ್ಗ ಜಗ್ಗಾಟ, ಕಬಡ್ಡಿ, ವಾಲಿಬಾಲ್ನಲ್ಲಿ ಡಿಎಆರ್ ಪ್ರಥಮ, ನಗರ ಉಪ ವಿಭಾಗ ದ್ವಿತೀಯ, ಕ್ರಿಕೆಟ್ ಹಾಗೂ 4X100 ಮೀಟರ್ ಓಟದಲ್ಲಿ ನಗರ ಉಪ ವಿಭಾಗ ಪ್ರಥಮ, ಡಿಎಆರ್ ತಂಡ ದ್ವಿತೀಯ ಸ್ಥಾನ ಗಳಿಸಿದವು. ಪುರುಷರ 100 ಮೀಟರ್ ಓಟದಲ್ಲಿ ಡಿಎಆರ್ ಅಜ್ಗರ್ ಅಲಿ ಪ್ರಥಮ, ಸನಾವುಲ್ಲಾ ದ್ವಿತೀಯ, ಚನ್ನಗಿರಿ ಉಪ ವಿಭಾಗದ ಅರುಣ್ ತೃತೀಯ ಸ್ಥಾನ ಪಡೆದರು. ಮಹಿಳೆಯರ 100 ಮೀಟರ್ ಓಟದಲ್ಲಿ ಮಾಲತಿ ಬಾಯಿ ಪ್ರಥಮ, ಸರಸ್ವತಿ ದ್ವಿತೀಯ, ಮಧುರ ತೃತೀಯ ಸ್ಥಾನ ಗಳಿಸಿದರು. ರೈಫಲ್ ಶೂಟಿಂಗ್ನಲ್ಲಿ ಪುರುಷರ ವಿಭಾಗದಲ್ಲಿ ಎಚ್.ವೇದಮೂರ್ತಿ, ಮಹಿಳೆಯರ ವಿಭಾಗದಲ್ಲಿ ಎಚ್.ಎಚ್.ಲಕ್ಷ್ಮಿದೇವಿ ಗೆದ್ದರು.
ವಿಜೇತರಿಗೆ ಹಾಗೂ ತಂಡಗಳಿಗೆ ನಿವೃತ್ತ ನ್ಯಾಯಾಧೀಶ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಜಿ.ಕೆ.ಗೋಖಲೆ, ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಎಸ್. ರವಿ ಬಹುಮಾನ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.