ADVERTISEMENT

ಎಸ್‌ಎಸ್‌ಎಂ ಜನ್ಮ ಮಹೋತ್ಸವಕ್ಕೆ ಸಿದ್ಧತೆ

ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ಡಿಕೆಶಿ ಸಹಿತ ಹಲವು ರಾಜ್ಯ ನಾಯಕರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 4:43 IST
Last Updated 22 ಸೆಪ್ಟೆಂಬರ್ 2022, 4:43 IST
ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ 55ನೇ ವರ್ಷದ ಜನ್ಮದಿನಾಚರಣೆಯ ಆಚರಣೆ ಅಂಗವಾಗಿ ಬುಧವಾರ ದಾವಣಗೆರೆ ಅರಳಿಮರ ವೃತ್ತದಿಂದ ಬೈಕ್‌ ರ‍್ಯಾಲಿ ನಡೆಯಿತು –ಪ್ರಜಾವಾಣಿ ಚಿತ್ರ
ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ 55ನೇ ವರ್ಷದ ಜನ್ಮದಿನಾಚರಣೆಯ ಆಚರಣೆ ಅಂಗವಾಗಿ ಬುಧವಾರ ದಾವಣಗೆರೆ ಅರಳಿಮರ ವೃತ್ತದಿಂದ ಬೈಕ್‌ ರ‍್ಯಾಲಿ ನಡೆಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಾಜಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅವರ 55ನೇ ಜನ್ಮದಿನಾಚರಣೆಗೆ ಬಾಪೂಜಿ ಎಂಬಿಎ ಕಾಲೇಜಿನ ಮೈದಾನ ಸಿದ್ಧಗೊಂಡಿದೆ. ಮಲ್ಲಿಕಾರ್ಜುನ ಅಭಿಮಾನಿ ಬಳಗವು ಈ ಆಚರಣೆಯನ್ನು ಹಮ್ಮಿಕೊಂಡಿದ್ದು, ಕಾಂಗ್ರೆಸ್‌ನ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ವೇದಿಕೆಯಲ್ಲಿ 40 ಗಣ್ಯರಿಗೆ ಆಸನದ ವ್ಯವಸ್ಥೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ 50 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪಕ್ಕದಲ್ಲಿಯೇ ಕಲ್ಪಿಸಲಾಗಿದೆ. 40 ಕೌಂಟರ್‌ಗಳು ಅದಕ್ಕಾಗಿ ತಯಾರಾಗಿವೆ.

ಮಧ್ಯಾಹ್ನ 1ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಸಮ್ಮುಖದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿಧಾನಸಭೆ ವಿರೋಧಪಕ್ಷದ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಖರ್ಗೆ, ಎಂ.ಸಿ. ವೇಣುಗೋಪಾಲ್, ಸಲೀಂ ಅಹ್ಮದ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಉಮಾಶ್ರೀ, ಎಚ್.ಎಂ. ರೇವಣ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಎಸ್. ರಾಮಪ್ಪ, ಜಮೀರ್ ಅಹ್ಮದ್, ಯು.ಬಿ. ವೆಂಕಟೇಶ್, ಬಿ.ಎಲ್.ಶಂಕರ್, ಡಿ.ಬಿ. ಶಾಂತನಗೌಡ, ಎಚ್. ಮಂಜಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಂಗೀತ ಸಂಯೋಜಕ ವಿ. ಹರಿಕೃಷ್ಣ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಚಿತಾರಾಂ, ಚಿಕ್ಕಣ್ಣ, ಪ್ರಜ್ವಲ್‌ ರೇವಣ್ಣ, ದರ್ಶನ್‌ ಸಹಿತ ಅನೇಕ ನಟ, ನಟಿಯರು ಭಾಗವಹಿಸಲಿದ್ದಾರೆ

ಬೈಕ್‌ ರ‍್ಯಾಲಿ: ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ 55ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬುಧವಾರ ನಗರದ ಅರಳಿಮರದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಬೈಕ್ ರ‍್ಯಾಲಿ ನಡೆಯಿತು.

ಅರಳಿಮರ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಬೈಕ್‌ ರ‍್ಯಾಲಿಗೆ ಚಾಲನೆ ನೀಡಿದರು. ಬಾಷಾ ನಗರ, ಆಜಾದ್ ನಗರ, ಗಾಂಧಿನಗರ, ದುರ್ಗಾಂಬಿಕ ದೇವಸ್ಥಾನ, ಹೊಂಡದ ಸರ್ಕಲ್, ಪಿ.ಬಿ. ರಸ್ತೆ, ವಿನೋಬನಗರ ರಸ್ತೆ, ಗುಂಡಿ ಸರ್ಕಲ್, ಲಕ್ಷ್ಮಿ ಫ್ಲೋರ್‌ ಮಿಲ್‌ ಮಾರ್ಗವಾಗಿ ಎಂಬಿಎ ಕಾಲೇಜ್ ಆವರಣ ತಲುಪಿತು.

ರ‍್ಯಾಲಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗಡಿಗುಡಾಳ್ ಮಂಜುನಾಥ್, ಕೆ.ಜಿ ಶಿವಕುಮಾರ್, ಆಯೂಬ್ ಪೈಲ್ವಾನ್, ದಿನೇಶ್ ಕೆ. ಶೆಟ್ಟಿ, ಡಿ.ಬಸವರಾಜ್, ಹರೀಶ್ ಬಸಾಪುರ, ಎ.ನಾಗರಾಜ್‌ ಸಹಿತ ಅನೇಕರು ಭಾಗವಹಿಸಿದ್ದರು.

ಇದರ ಜತೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿಯೂ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದು, ಶಾಮನೂರಿನಿಂದ ಪ್ರಾರಂಭವಾಗಿ ಶಿರಮಗೊಂಡನಹಳ್ಳಿ, ಆರನೇಕಲ್ಲು, ಹದಡಿಗಾಗಿ ಸಾಗಿ ಬೆಳವನೂರಿನ ನಿರಾಶ್ರಿತರ ಕೇಂದ್ರ ಬಳಿ ಅಂತ್ಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.