ಹೊಸನಗರ: ನಗರ ಸಂಸ್ಕೃತಿ ಗ್ರಾಮಗಳ ಮೇಲೆ ಮಾಡುವ ಆಕ್ರಮಣವನ್ನು ತಡೆಯಬೇಕು. ಹಳ್ಳಿಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಯುವ ಕಲಾವಿದರಿಂದ ಆಗಬೇಕು ಎಂದು ದೇಸಿ ಚಿಂತಕ, ರಂಗಕರ್ಮಿ ಪ್ರಸನ್ನ ಸಲಹೆ ನೀಡಿದರು.
ತಾಲ್ಲೂಕಿನ ದೊಂಬೆಕೊಪ್ಪದಲ್ಲಿ ಸೋಮವಾರ ‘ಸಾರಾ’ ಸಂಸ್ಥೆ ವತಿಯಿಂದ 8 ದಿನಗಳ ರಾಷ್ಟ್ರಮಟ್ಟದ ದೇಸಿ ಚಿತ್ತಾರ ರಚನೆಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳ್ಳಿಯ ಸಂಸ್ಕೃತಿಯನ್ನು ಪಟ್ಟಣಕ್ಕೆ ಪರಿಚಯಿಸಿ, ಪಟ್ಟಣದ ಜನರನ್ನು ಹಳ್ಳಿ ಸಂಸ್ಕೃತಿಗೆ ತರುವ ಕೆಲಸವೂ ಆಗಬೇಕು ಎಂದು ಹೇಳಿದರು.
ನಗರ-ಗ್ರಾಮ, ಕುಶಲಕಲೆ-ಕಲೆ, ಶ್ರೀಮಂತ-ಬಡವ, ಪರದೇಸಿ-ದೇಸಿಕಲೆಗಳ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ನಾ ಡಿಸೋಜ, 'ಮಲೆನಾಡಿನಲ್ಲಿ ಶ್ರೀಮಂತವಾಗಿದ್ದ ಚಿತ್ತಾರ ಕಲೆ ಇಂದು ಮಾಯವಾಗುತ್ತಿದೆ. ಒಂದು ತಲೆಮಾರಿನಿಂದ ಮಾಸುತ್ತಿರುವ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕು’ ಎಂದರು.
ವಿವಿಧ ರಾಜ್ಯಗಳ ದೇಸಿ ಕಲಾವಿದರನ್ನು ದೊಂಬೆಕೊಪ್ಪದಂತಹ ಪುಟ್ಟ ಹಳ್ಳಿಗೆ ಕರೆಸಿ ಅವುಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವ ಸಾರಾ ಸಂಸ್ಥೆಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಮಧ್ಯಪ್ರದೇಶದ ಬಿಲ್ ಚಿತ್ತಾರ, ಗುಜರಾತ್ ಗೋಂಡ್ ಚಿತ್ತಾರ ಕಲೆ, ಪಿಥೋರಿ ಚಿತ್ತಾರ, ಮಹಾರಾಷ್ಟ್ರದ ವರಲಿ, ಮಲೆನಾಡಿನ ಹಸೆ ಚಿತ್ತಾರ, ಕರಾವಳಿಯ ಮೆಕ್ಕೆಕಟ್ಟು ಭೂತಾರಾಧನೆಯ ಮೂರ್ತಿ ಶಿಲ್ಪ ಸೇರಿದಂತೆ ವಿವಿಧ ಬಗೆಯ ದೇಸಿ ಚಿತ್ತಾರಗಳನ್ನು ಸ್ಥಳದಲ್ಲಿ ಕಲಾವಿದರು ಬರೆದು, ಪ್ರದರ್ಶಿಸಿದರು.
ವಿವಿಧ ರಾಜ್ಯಗಳಿಂದ ಬಂದ ದೇಸಿ ಕಲಾವಿದರನ್ನು ಈ ವೇಳೆಯಲ್ಲಿ ಸನ್ಮಾನಿಸಲಾಯಿತು. ಶ್ರೀಪಾದ ಸ್ವಾಗತಿಸಿದರು. ಸಾರಾ ಅರಣುಕುಮಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.