ದಾವಣಗೆರೆ: ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾವವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಬಣ) ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ
ನಡೆಸಿದರು.
ಜಯಚಾಮರಾಜೇಂದ್ರ ವೃತ್ತದಿಂದ ಹೊರಟ ಪ್ರತಿಭಟನಕಾರರು ಮಂಡಿಪೇಟೆ, ಪಿ.ಬಿ. ರಸ್ತೆ, ಅಶೋಕ ರಸ್ತೆ, ಜಯದೇವ ವೃತ್ತ ಹಾಗೂ ಅಂಬೇಡ್ಕರ್ ವೃತ್ತಗಳ ಮೂಲಕ ಬೆಸ್ಕಾಂ ಅಧೀಕ್ಷಕರ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸೂಪರಿಂಟೆಂಡ್ ಎಂಜಿನಿಯರ್ ಜಗದೀಶ್ ಅವರಿಗೆ ಬಂದು ಮನವಿ ಸಲ್ಲಿಸಿದರು.
‘ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ 10 ಎಚ್ಪಿವರೆಗೂ ಉಚಿತವಾಗಿ ವಿದ್ಯುತ್ ನೀಡುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಗೆ ಮುಂದಾಗಿದ್ದು, ಇದು ರೈತರಿಗೆ ಮಾರಕವಾಗಿದೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.
‘ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಫಲಾನುಭವಿಗಳಿಂದ ಬಲವಂತವಾಗಿ ಬಾಕಿ ವಸೂಲಿ ಮಾಡುತ್ತಿದ್ದು, ಇದುವರೆಗೂ ಇಂತಿಷ್ಟು ಯೂನಿಟ್ಗಳನ್ನು ನಿಗದಿಪಡಿಸಿ ಉಚಿತ ವಿದ್ಯುತ್ ಅನ್ನು ನಿಲ್ಲಿಸುವ ಹುನ್ನಾರ ನಡೆದಿದ್ದು, ತಕ್ಷಣ ಅದನ್ನು ನಿಲ್ಲಿಸಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ವಿದ್ಯುತ್ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಪ್ರಸಾದ್, ರೈತ ಮುಖಂಡರಾದ ಚಿಕ್ಕತೊಗಲೇರಿ ಕೆಂಚಪ್ಪ, ಹುಚ್ಚವ್ವನಹಳ್ಳಿ ಸಿದ್ದಪ್ಪನಾಯಕ, ವಿ.ಎಚ್. ರಾಮಚಂದ್ರ, ಸಿದ್ದೇಶ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಸತೀಶ್, ಕೆಂಚಮಹಳ್ಳಿ ಹನುಮಂತ, ಯಲೋದಹಳ್ಳಿ ರವಿ, ಹಿರೆಕೊಗಲೂರು ಕುಮಾರ್ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.