ದಾವಣಗೆರೆ: ಎಸ್.ಜೆ.ಎಂ. ನಗರ ರಿಂಗ್ ರೋಡ್ನಿಂದ ಅಕ್ತರ್ ರಜಾ ಸರ್ಕಾಲ್ವರೆಗಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಮತ್ತು ಹಜರತ್ ಟಿಪ್ಪುಸುಲ್ತಾನ್ ಟ್ರಸ್ಟ್ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ದಾವಣಗೆರೆ ಪಾಲಿಕೆಯಾಗಿ ಪರಿವರ್ತನೆಯಾಗಿ 12 ವರ್ಷ ಕಳೆದರೂ, ಸ್ಮಾರ್ಟ್ಸಿಟಿಯಾದರೂ ಹಳೇ ದಾವಣಗೆರೆ ಭಾಗದ ಜನರಿಗೆ ಮೂಲ ಸೌಕರ್ಯಗಳು ದೊರೆತಿಲ್ಲ. ಪಾಲಿಕೆ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ ಕಚೇರಿ, ರೈಲ್ವೆ ಸ್ಟೇಷನ್ ಹೀಗೆ ಎಲ್ಲಾ ಕಡೆ ನಿತ್ಯ ಜನರು ಓಡಾಡುವ ಅಕ್ತರ್ ರಜಾ ಸರ್ಕಲ್ ಮತ್ತು ಎಸ್ಜೆಎಂ ನಗರ ರಿಂಗ್ ರೋಡನ್ನೇ ಬಳಸುತ್ತಾರೆ. ಈ ರಸ್ತೆ ಗುಂಡಿ ಮತ್ತು ದೂಲಿನಿಂದ ತುಂಬಿ ಹೋಗಿದೆ. ಈ ಬಗ್ಗೆ ಎಂಜಿನಿಯರ್ ರಾಮಚಂದ್ರಪ್ಪ ಅವರ ಗಮನಕ್ಕೆ ತಂದರರೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
15 ದಿನಗಳ ಒಳಗಾಗಿ ತಾತ್ಕಾಲಿಕವಾಗಿ ಸರಿ ಪಡಿಸಬೇಕು. ಆನಂತರ ಉತ್ತಮ ರಸ್ತೆ ಮಾಡಿಕೊಡಬೇಕು. ಇಲ್ಲದೇ ಇದ್ದರೆ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಜನಶಕ್ತಿಯ ಸತೀಶ್ ಅರವಿಂದ್, ಆದೀಲ್ ಖಾನ್, ಖಲೀಲ್ ಬಿ, ಯಲ್ಲಪ್ಪ, ಗುರುಮೂರ್ತಿ, ಟಿಪ್ಪುಸುಲ್ತಾನ್ ಟ್ರಸ್ಟ್ನ ಮೆಹಬೂಬ್ ಬಾಷಾ, ರಹಮತ್ ಉಲ್ಲಾ, ಹಕೀಬ್ ಜಾವಿದ್, ಮುಬಾರಕ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.