ADVERTISEMENT

ಹರಿಹರ: ಕಕ್ಕರಗೊಳ್ಳ-ಚಿಕ್ಕಬಿದರೆ ರಸ್ತೆ ನಿರ್ಮಿಸಿ

ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 6:09 IST
Last Updated 17 ಜುಲೈ 2021, 6:09 IST
ಹರಿಹರ ತಾಲ್ಲೂಕಿನ ಕಕ್ಕರಗೊಳ್ಳ-– ಚಿಕ್ಕಬಿದರೆ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಹರಿಹರ ತಾಲ್ಲೂಕಿನ ಕಕ್ಕರಗೊಳ್ಳ-– ಚಿಕ್ಕಬಿದರೆ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.   

ಹರಿಹರ: ತಾಲ್ಲೂಕಿನ ಕಕ್ಕರಗೊಳ್ಳ- ಚಿಕ್ಕಬಿದರೆ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಚಿಕ್ಕಬಿದರೆ, ಸಾರಥಿ, ಪಾಮೇನಹಳ್ಳಿ ಹಾಗೂ ದೀಟೂರು ಗ್ರಾಮಸ್ಥರು ಶುಕ್ರವಾರ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಚಿಕ್ಕಬಿದರೆ ರಾಮಸೇನೆಯ ಮುಖ್ಯಸ್ಥ ಎಸ್‍. ನಾಗರಾಜ್‍ ಮಾತನಾಡಿ, ‘ಕಳೆದ 2008ರಲ್ಲಿ ಗಂಗನರಸಿ ಕ್ರಾಸ್‍ನಿಂದ ಚಿಕ್ಕಬಿದರೆವರೆಗೆ ರಸ್ತೆ ನಿರ್ಮಾಣವಾಗಿತ್ತು. ಮರಳಿನ ಹಾಗೂ ಮಣ್ಣಿನ ಲಾರಿಗಳ ಅವ್ಯಾವಹತ ಓಡಾಟದಿಂದ ರಸ್ತೆ ಹಾಳಾಗಿತ್ತು. ಈ ಬಗ್ಗೆ 10 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ’ ಎಂದು ದೂರಿದರು.

‘ರಸ್ತೆಯ ದುರವಸ್ಥೆ ಬಗ್ಗೆ 2019ರಲ್ಲಿ ಸಾಮಾಜಿಕ ತಾಣದ ಮೂಲಕ ಪ್ರಧಾನಿ ಅವರ ಗಮನ ಸೆಳೆಯಲಾಗಿತ್ತು. ಆಗ ಕೇವಲ 10 ಗಾಡಿಗಳ ಮಣ್ಣು ಹಾಕಿ ರಿಪೇರಿ ಮಾಡಲಾಗಿತ್ತು. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣವಾಗಿಲ್ಲ’ ಎಂದು ಆರೋಪಿಸಿದರು.

ADVERTISEMENT

ರಸ್ತೆ ನಿರ್ಮಾಣ ಮಾಡದಿದ್ರೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಕೆ.ಎನ್. ಶಿವಮೂರ್ತಿ ಮಾತನಾಡಿ, ‘2019ರಲ್ಲಿ ಕಕ್ಕರಗೊಳ್ಳ- ಚಿಕ್ಕಬಿದರಿ 9 ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹ 15 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಜೆಟ್‍ನಲ್ಲಿ ಅನುಮೋದನೆ ದೊರೆತಿದೆ. ಹಣಕಾಸು ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ದೊರೆತ ನಂತರ, ಟೆಂಡರ್‍ ಪ್ರಕ್ರಿಯೆ ಆರಂಭಿಸಲಾಗುವುದು. ರಸ್ತೆಯ ವಾರ್ಷಿಕ ನಿರ್ವಹಣೆಗೆ ₹ 3.5 ಲಕ್ಷ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು. ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಪ್ಪ, ಗ್ರಾಮಸ್ಥರಾದ ಲಲಿತಾ, ಕೆಂಚಪ್ಪ, ಬಸವರಾಜ್‍, ನಿಂಗನಗೌಡ, ಹಾಲೇಶಪ್ಪ, ಗುಡ್ಡಪ್ಪ, ಬಸವರಾಜ್‍, ಪ್ರಜ್ವಲ್‍, ಪ್ರಮೋದ್‍, ಭರತ್‍, ಎ.ಕೆ. ನಾಗರಾಜ, ಕಿರಣ್‍, ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.