ADVERTISEMENT

ಸುಗಮ ಸಂಚಾರ ವ್ಯವಸ್ಥೆಗೆ ತ್ರೈಮಾಸಿಕ ಸಭೆ: ಎಸ್ಪಿ

ಹೋಳಿ ಹಬ್ಬ: ರಾಸಾಯನಿಕದ ಬದಲು ಅರಿಶಿನ, ಕುಂಕುಮ ಬಳಸಲು ಮೇಯರ್ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 15:17 IST
Last Updated 8 ಮಾರ್ಚ್ 2020, 15:17 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿದರು. ಮೇಯರ್ ಬಿ.ಜಿ. ಅಜಯಕುಮಾರ್, ಎಎಸ್‌ಪಿ ಎಂ.ರಾಜೀವ್ ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿದರು. ಮೇಯರ್ ಬಿ.ಜಿ. ಅಜಯಕುಮಾರ್, ಎಎಸ್‌ಪಿ ಎಂ.ರಾಜೀವ್ ಇದ್ದರು.   

ದಾವಣಗೆರೆ: ನಗರದಲ್ಲಿ ಹಂದಿಗಳು ಹಾಗೂ ಬೀದಿ ನಾಯಿಗಳ ನಿಯಂತ್ರಣ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ತ್ರೈಮಾಸಿಕ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಹಬ್ಬದ ಪ್ರಯುಕ್ತ ಇಲ್ಲಿನ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ಸ್ಮಾರ್ಟ್‌ಸಿಟಿಯಾಗಿರುವುದರಿಂದ ಸ್ಮಾರ್ಟ್ ಸಿಟಿ ಎಂ.ಡಿ, ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರು, ಸದಸ್ಯರು, ಅಧಿಕಾರಿಗಳು, ಎಂಜಿನಿಯರಿಂಗ್ ವಿಭಾಗ ಪೊಲೀಸ್ ಹಾಗೂ ಆರ್‌ಟಿಒ ಅಧಿಕಾರಿಗಳು ಸೇರಿ ಸಭೆ ನಡೆಸಲಿದ್ದು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪಡೆದು ಅವುಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ADVERTISEMENT

ಮಧ್ಯಾಹ್ನ 1ರೊಳಗೆ ಹೋಳಿ ಮುಗಿಸಿ

ಕಾಮದಹನವನ್ನು ರಾತ್ರಿ 10.30 ಹಾಗೂ ಹೋಳಿ ಹಬ್ಬದ ಆಚರಣೆಯನ್ನು ಮಧ್ಯಾಹ್ನ 1ಕ್ಕೆ ಮುಗಿಸಬೇಕು. ಹೋಳಿ ಹಬ್ಬಕ್ಕೆ ಕುಂದವಾಡ ಹಾಗೂ ಟಿವಿ ಸ್ಟೇಷನ್ ಕೆರೆಗಳ ನೀರು ಬಳಸಬಾರದು. ಕೆರೆಗಳಿಗೆ ಭದ್ರತೆ ಒದಗಿಸುವ ಸಿಬ್ಬಂದಿ ನಿಯೋಜಿಸಲಾಗುವುದು. ಬೈಕ್ ರ‍್ಯಾಲಿಗಳನ್ನು ತಡೆಯುವ ನಿಟ್ಟಿನಲ್ಲಿ ಬಿಐಇಟಿ, ಶಾಮನೂರು, ಹದಡಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು. 25 ವಿಶೇಷ ವಾಹನಗಳು, ಪ್ರತಿ ಠಾಣೆಗೂ 13 ಗಸ್ತು ವಾಹನಗಳು, ಎರಡು ಇಂಟರ್‌ಸೆಪ್ಟರ್ ವಾಹನಗಳು ಸಂಚರಿಸುತ್ತವೆ ಎಂದರು.

ಡಿಜೆ ಬದಲು ಸ್ಥಳೀಯ ಕಲೆಗಳನ್ನು ಉಳಿಸಿ

ಮಹಾರಾಷ್ಟ್ರ, ಮುಂಬೈ ಹಾಗೂ ಪುಣೆಗಳಲ್ಲಿ ಈಗಾಗಲೇ ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಈ ನಿಟ್ಟಿನಲ್ಲಿ ನೀವು ಬದಲಾಗುವುದು ಒಳಿತು ಎಂದು ಹಿಂದೂ ಮಹಾ ಗಣಪತಿ ಸಂಘಟನೆಯ ಮುಖ್ಯಸ್ಥ ಜೊಳ್ಳಿ ಗುರು ಅವರಿಗೆ ಸಲಹೆ ನೀಡಿದರು.

ಡಿಜೆಗಳಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತಿದ್ದು, ಹಲವು ನಾಗರಿಕರು ಮನವಿ ಮಾಡಿದ್ದಾರೆ. ಡಿಜೆಗಳಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಸ್ಥಳೀಯ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ಕಲೆಗಳು ಉಳಿಯುತ್ತವೆ. ಡಿಜೆ ಬಳಸುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದರು.

ಹೆಲ್ಮೆಟ್ ಬಳಸದೇ ಜಿಲ್ಲೆಯಲ್ಲಿ 300 ಸಾವು

ಕೋವಿಡ್‌–19ಯಿಂದಾಗಿ ವಿಶ್ವದಲ್ಲಿ 3 ಸಾವಿರ ಜನರು ಮೃತಪಟ್ಟಿದ್ದಾರೆ. ಆದರೆ ಹೆಲ್ಮೆಟ್ ಬಳಸದೇ ಅಪಘಾತದಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ 300 ಜನ ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 13 ಲಕ್ಷ ಜನ ಸಾಯುತ್ತಿದ್ದಾರೆ. ರೋಗದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುತ್ತಿದ್ದಾರೆ. ರೋಗದ ಬಗ್ಗೆ ಇರುವ ಜಾಗೃತಿ ಹೆಲ್ಮೆಟ್ ಧರಿಸುವಲ್ಲಿ ಇಲ್ಲ ಎಂದು ಹನುಮಂತರಾಯ ವಿಷಾದ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಸಿಪಿಐಗಳಾದ ಗಜೇಂದ್ರಪ್ಪ, ತಿಮ್ಮಣ್ಣ ಎನ್, ಪೊಲೀಸರು ಹಾಗೂ ನಾಗರಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.