ದಾವಣಗೆರೆ: ‘ಜನಸಂಪರ್ಕ ಕಚೇರಿಗೆ ಬರುವ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ತ್ವರಿತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ನಗರದ ಪಿ.ಬಿ. ರಸ್ತೆಯ ಉಪವಿಭಾಗಾಧಿಕಾರಿ ಕಚೇರಿ ಪಕ್ಕದಲ್ಲಿ ಸೋಮವಾರ ತಮ್ಮ ಜನಸಂಪರ್ಕ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಗೆದ್ದುಬಂದ ಮೂರುವರೆ ತಿಂಗಳ ಬಳಿಕ ಕಚೇರಿ ತೆರೆಯಲು ಸರ್ಕಾರ ಜಾಗ ನೀಡಿದೆ. ದಾವಣಗೆರೆಯಲ್ಲಿದ್ದಾಗ ಜನಸಂಪರ್ಕ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಇರುತ್ತೇನೆ’ ಎಂದರು.
ಲೋಕಸಭೆಯಲ್ಲಿ ಗೆಲ್ಲುವ ವಿಶ್ವಾಸ
‘ಕೆಲವು ಎಂ.ಪಿಗಳು ಹೊರಗಿನ ಗಾಳಿಗೆ ಬರಲ್ಲ. ನಮ್ಮ ಎಂ.ಪಿ ಜಿ.ಎಂ. ಸಿದ್ದೇಶ್ವರ ಗಾಳಿಯಲ್ಲಿ ಅಡ್ಡಾಡುತ್ತಿದ್ದಾರೆ. ಜನರ ಸಾಕಷ್ಟು ಕೆಲಸ ಮಾಡಿಕೊಡುತ್ತಿದ್ದಾರೆ. ಎಲ್ಲ ಹಳ್ಳಿಗಳಿಗೂ ನಾಲ್ಕೈದು ಬಾರಿ ಹೋಗಿದ್ದಾರೆ. ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಮತ್ತೊಂದು ಬಾರಿ ಸುಲಭವಾಗಿ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆ ಚುನಾವಣೆ
‘ನಮ್ಮ ಪಕ್ಷದ ಗಟ್ಟಿ ಅಭ್ಯರ್ಥಿಗಳಿರುವ ವಾರ್ಡ್ಗಳ ಮೀಸಲಾತಿಯನ್ನು ಸರ್ಕಾರ ಬದಲಾಯಿಸಿದೆ. ಪರಿಷ್ಕೃತ ಮೀಸಲಾತಿ ಪಟ್ಟಿ ಬಂದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ರವೀಂದ್ರನಾಥ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕುಡಿಯುವ ನೀರು ಕೊಟ್ಟಿಲ್ಲ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಹಲವೆಡೆ ಬೀದಿ ದೀಪಗಳನ್ನು ಹಾಕಿಲ್ಲ. ಕಳೆದ ವರ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಪಾಲಿಕೆ ಸಭೆಯಲ್ಲಿ ಜನರ ನೋವಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಜನ ನೋಡುತ್ತಾರೆ’ ಎಂದರು.
‘ಪಾರ್ಟಿ ಒಳಗಿನ ಕಚ್ಚಾಟದಿಂದಾಗಿ ಪಾಲಿಕೆಯ ಕಳೆದ ಚುನಾವಣೆಯಲ್ಲಿ ಸೋತಿದ್ದೇವೆ. ಈಗ ನಮ್ಮಲ್ಲಿ ಅಪಸ್ವರದ ಧ್ವನಿ ಇಲ್ಲ. ಹೀಗಾಗಿ ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.