ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಮಂಗಳವಾರ ಉತ್ತಮವಾಗಿ ಸುರಿದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.
ತಾಲ್ಲೂಕಿನ ದೇವರಹಳ್ಳಿಯಲ್ಲಿ 12.2 ಮಿ.ಮೀ., ಚನ್ನಗಿರಿ– 12.6 ಮಿ.ಮೀ., ಕತ್ತಲಗೆರೆ–8.2 ಮಿ.ಮೀ., ತ್ಯಾವಣಿಗೆ 9.8ಮಿ.ಮೀ., ಬಸವಾಪಟ್ಟಣ– 9.3ಮಿ.ಮೀ., ಜೋಳದಹಾಳ್–6.6ಮಿ.ಮೀ., ಸಂತೇಬೆನ್ನೂರು–5.2ಮಿ.ಮೀ., ಉಬ್ರಾಣಿ–13.2ಮಿ.ಮೀ ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 12 ಮಿ.ಮೀ. ಮಳೆಯಾಗಿದೆ. ಮಳೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಪಟ್ಟರಾಜಗೌಡ ತಿಳಿಸಿದ್ದಾರೆ.
ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ಕಾರ್ಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.ಈಗಾಗಲೇ ಹದಿನೈದು ದಿನಗಳಿಂದ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು, ಪ್ರಮುಖವಾಗಿ ಹತ್ತಿ, ಶೇಂಗಾ, ಹೆಸರು, ಅವರೆ, ಅಲಸಂದೆ, ತೊಗರಿ, ಪಾಪ್ ಕಾರ್ನ್, ಮೆಕ್ಕೆಜೋಳ, ಹೈಬ್ರಿಡ್ ಜೋಳ, ಈರುಳ್ಳಿ, ಹಸಿ ಮೆಣಸಿನಕಾಯಿ ಸಸಿ ನಾಟಿ, ಟೊಮಾಟೊ ಬಿತ್ತನೆ ಮಾಡುತ್ತಿದ್ದಾರೆ.
ತಾಲ್ಲೂಕಿನ26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕಜೋಳ ಬಿತ್ತನೆ ಮಾಡಲಾಗಿದೆ.ಶೇ 30ರಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಲ್ಲಾಡದ ತಿಳಿಸಿದರು.
ರೈತರು ಎಲ್ಲಿ ಬೇಕೆಂದರಲ್ಲಿ ಬಿತ್ತನೆ ಬೀಜವನ್ನು ಖರೀದಿಸದೇ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜವನ್ನು ಖರೀದಿಸಬೇಕು. ನಕಲಿ ಬೀಜಗಳನ್ನು ಖರೀದಿಸಬಾರದು. ನಕಲಿ ಬೀಜ ಮಾರಾಟ ಮಾಡುವವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.