ದಾವಣಗೆರೆ: ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಅಲ್ಲ. ರಾಜಕೀಯ ಹಿತಾಸಕ್ತಿಗೆ ವೀರಶೈವ ಲಿಂಗಾಯತ ಧರ್ಮದ ಒಳಪಂಗಡಗಳನ್ನು ಛಿದ್ರಗೊಳಿಸಿ ಗೊಂದಲ ಸೃಷ್ಟಿಸುವುದಕ್ಕೆ ಪಂಚಪೀಠಗಳು ಅವಕಾಶ ನೀಡುವುದಿಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
‘ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿ ನಿರ್ಧಾರ ಕೈಗೊಂಡ ಮರುಗಳಿಗೆಯಲ್ಲೇ ರಾಜ್ಯ ಸರ್ಕಾರ ಜಾತಿಗಣತಿ ಜೊತೆಗೆ ಸಾಮಾಜಿಕ ಸಮೀಕ್ಷೆಗೆ ಮುಂದಾಗಿದೆ. ಜನರ ದಾರಿ ತಪ್ಪಿಸುವ ಈ ಪ್ರಯತ್ನವನ್ನು ವಿರೋಧಿಸುತ್ತೇವೆ’ ಎಂದು ಹೇಳಿದರು.
ಮಂಗಳವಾರ ಇಲ್ಲಿ ನಡೆದ ಪಂಚಪೀಠಾಧೀಶರ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮುಸಲ್ಮಾನರಲ್ಲಿ ಹಲವು ಒಳಪಂಗಡಗಳಿವೆ. ಎಲ್ಲ ಒಳಪಂಗಡಗಳನ್ನು ಮುಸ್ಲಿಂ ಎಂದೇ ಗುರುತಿಸಲಾಗುತ್ತಿದೆ. ಅದೇ ರೀತಿ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಬದಿಗಿಟ್ಟು ಒಂದಾಗಿ ನೋಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಕೈಗೊಳ್ಳುತ್ತಿರುವ ಜಾತಿ ಗಣತಿ ಸ್ವಾಗತಾರ್ಹ ನಡೆ’ ಎಂದರು.
ಉಜ್ಜಯಿನಿ ಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಜರಿದ್ದರು.
ದಾವಣಗೆರೆಯಲ್ಲಿ 21 22ಕ್ಕೆ ಶೃಂಗ ಕವಲು
ದಾರಿಯಲ್ಲಿ ಸಾಗುತ್ತಿರುವ ವೀರಶೈವ ಲಿಂಗಾಯತ ಧರ್ಮವನ್ನು ಒಗ್ಗೂಡಿಸುವ ಉದ್ದೇಶದಿಂದ ವೀರಶೈವ ಪೀಠಾಚಾರ್ಯ ಮತ್ತು ಶಿವಾಚಾರ್ಯರ ಶೃಂಗವನ್ನು ಜುಲೈ 21 ಮತ್ತು 22ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು. ‘ತಪ್ಪು ಕಲ್ಪನೆಯಿಂದ ವೀರಶೈವ ಪಂಚಪೀಠಗಳಲ್ಲಿ ಒಂದೂವರೆ ದಶಕದಿಂದ ಗೊಂದಲ ಆಂತರಿಕ ಸಮಸ್ಯೆಗಳು ತಲೆದೋರಿವೆ. ವೀರಶೈವ ಲಿಂಗಾಯತ ಧರ್ಮ ಉಪ ಜಾತಿಗಳಾಗಿ ಹಂಚಿ ಹೋಗುತ್ತಿದೆ. ಧರ್ಮದ ಒಳಗಿನ ಭಿನ್ನ ಚಟುವಟಿಕೆಗೆ ಕಡಿವಾಣ ಹಾಕಿ ಧಾರ್ಮಿಕ ಪುನಃಶ್ಚೇತನಕ್ಕೆ ಪಂಚಪೀಠಗಳು ದೃಢವಾದ ಹೆಜ್ಜೆ ಇಟ್ಟಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.