ADVERTISEMENT

ಕೇಳಿದಷ್ಟು ಅಕ್ಕಿ ಕೊಡಲು ಆಗುವುದಿಲ್ಲ: ಸಂಸದ ಜಿ.ಎಂ.ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 14:15 IST
Last Updated 17 ಜೂನ್ 2023, 14:15 IST
ಜಿ.ಎಂ.ಸಿದ್ದೇಶ್ವರ
ಜಿ.ಎಂ.ಸಿದ್ದೇಶ್ವರ   

ದಾವಣಗೆರೆ: ‘ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯ ಅನ್ವಯ ರಾಜ್ಯಕ್ಕೆ ಎಷ್ಟು ಪ್ರಮಾಣದ ಅಕ್ಕಿ ನೀಡಬೇಕೋ ಅಷ್ಟು ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಬಫರ್ ಸ್ಟಾಕ್ ಅಕ್ಕಿಯನ್ನು ಎಲ್ಲರೂ ಕೇಳಿದ ತಕ್ಷಣ ಕೊಟ್ಟರೆ, ಭಾರತದಲ್ಲಿ ಶ್ರೀಲಂಕಾ ಇಲ್ಲವೇ ಪಾಕಿಸ್ತಾನದ ಪರಿಸ್ಥಿತಿ ತಲೆದೋರಲಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

‘ಕೇಂದ್ರ ಸರ್ಕಾರ ಈಗಾಗಲೇ 5 ಕೆ.ಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್‌ನವರು 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದಾರೆ. ಬಾಕಿ 5 ಕೆ.ಜಿ ಅಕ್ಕಿಯನ್ನು ಅವರು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲಿ’ ಎಂದರು.

ಸಿದ್ದೇಶ್ವರ ಸೋಲುವುದನ್ನು ನೋಡಬೇಕು ಎಂದಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶಿವಶಂಕರಪ್ಪ ನನ್ನ ಮಾವ. ತಂದೆ ಸಮಾನರು. 2004ರಿಂದಲೂ ನಾನು ಸೋಲುವುದನ್ನು ನೋಡಿಕೊಂಡು ಬಂದಿದ್ದಾರೆ. ಮುಂದೆಯೂ ಸೋಲುವುದನ್ನು ನೋಡಿಕೊಂಡು ಹೋಗುತ್ತಾರೆ. ಅವರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ ಯಾರು ಬೇಡ ಎನ್ನುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘2019ರವರೆಗೂ ಸಹಕಾರ ನೀಡಿ ಆಶೀರ್ವಾದ ಮಾಡಿದ್ದಾರೆ. ಈಗಲೂ ಸಹಕಾರ ಕೊಟ್ಟು, ಆಶೀರ್ವಾದ ಮಾಡಿ ಸೋಲಿಸಲಿ. ಚುನಾವಣೆ ಖರ್ಚಿಗೆ ₹1 ಕೋಟಿ ಕೊಡೊತ್ತಾರೋ ₹5 ಕೋಟಿ ಕೊಡುತ್ತಾರೋ... ಎಷ್ಟು ಕೊಡುತ್ತಾರೆ. ಅವರು ಹಣ ನೀಡಿದರೆ ಪಡೆಯುವೆ’ ಎಂದರು. 

‘ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಇಲ್ಲ. ಕೆಲವರು ಅವರವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಯಡಿಯೂರಪ್ಪ ನಂತರ ಚುಕ್ಕಾಣಿ ಹಿಡಿದವರಿಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆನ್ನುವ ಛಲವಿರಲಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಬೊಮ್ಮಾಯಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.