ADVERTISEMENT

ದಾವಣಗೆರೆ | ಧರ್ಮ ಎಂದರೆ ಬದುಕುವ ವಿಧಾನ: ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:29 IST
Last Updated 22 ಸೆಪ್ಟೆಂಬರ್ 2025, 5:29 IST
   

ಕಡರನಾಯ್ಕನಹಳ್ಳಿ: ‘ಪ್ರಕೃತಿಯ ಎಲ್ಲ ಚರಾಚರಗಳಿಗೆ ಸೃಷ್ಟಿಕರ್ತನಿದ್ದಾನೆ. ಧರ್ಮ ಎಂದರೆ ಬದುಕುವ ವಿಧಾನ. ಬೇರ್ಪಡಿಸುವುದಲ್ಲ. ಇದೆ ಪೈಗಂಬರರ ನೀತಿಯ ಸಾರ’ ಎಂದು ಉಡುಪಿಯ ರಾಜ್ಯ ಜಮಾ ಅತೆ ಇಸ್ಲಾಮಿ ಹಿಂದ್ ಪ್ರಧಾನ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಹೇಳಿದರು.

ಸಮೀಪದ ಎಕ್ಕೆಗೊಂದಿ ಗ್ರಾಮದಲ್ಲಿ ಹರಿಹರ ಜಮಾ ಅತೆ ಇಸ್ಲಾಮೀ ಹಿಂದ್ ರಾಬಿತಾ ಎ ಮಿಲ್ಲತ್ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಯದ ಹರಿಕಾರ ಪೈಗಂಬರ್ ಮಹಮ್ಮದ್ ಸೀರತ್ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಯಾರಾದರೂ ಮಸೀದಿಗೆ ಕಲ್ಲು ಹೊಡೆದರೆ ನೀವು ಬೀದಿಗಿಳಿಯಬಾರದು. ಪ್ರತಿಯಾಗಿ ದೇವಸ್ಥಾನಕ್ಕೆ ಕಲ್ಲು ಹೊಡೆಯಬಾರದು. ಪ್ರತಿಯಾಗಿ ಮಸೀದಿ ಆಜಾನ್ ಮೂಲಕ ಕಲ್ಲು ಹೊಡೆದವರನ್ನು ನಾವು ಕ್ಷಮಿಸಿದ್ದೇವೆ ಎಂದು ಹೇಳಿ. ಕ್ಷಮೆ ಸೃಷ್ಟಿಕರ್ತನಿಗೆ ಪ್ರಿಯವಾಗುತ್ತದೆ. ಕೂಡಿ ಬಾಳುವುದು, ನ್ಯಾಯದಿಂದ ಬಾಳುವುದರಿಂದ ದೇವರಿಗೆ ಹತ್ತಿರವಾಗುತ್ತೀರಿ’ ಎಂದು ಹೇಳಿದರು.

‘ಪ್ರಾಮಾಣಿಕ ಜೀವನ, ನೇರ ನುಡಿ, ಸಚ್ಚಾರಿತ್ರ್ಯ, ಬೆವರ ಸುರಿಸಿ ಅನ್ನವನ್ನು ಸೇವಿಸುವುದು ಶ್ರೇಷ್ಠ ಧರ್ಮವಾಗಿದೆ. ಸಮಾಜ ಎಂಬುದು ಕುಟುಂಬಗಳ ಒಂದು ಗುಂಪು. ಹೆತ್ತವರನ್ನು ಗೌರವದಿಂದ ಕಾಣಬೇಕು’ ಎಂದು ಹೇಳಿದರು.  

‘ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ ಆದರ್ಶದ ಔಚಿತ್ಯ’ ಮತ್ತು ‘ಪ್ರವಾದಿ ಮುಹಮ್ಮದರನ್ನು ಅರಿಯಿರಿ’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಜೆಐಎಚ್ ಅದ್ಯಕ್ಷ ವೈ.ಜಿ. ಅಬ್ದುಲ್ ಖಯ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎ. ರಿಯಾಜ್ ಅಹ್ಮದ್ ಕಾರ್ಯಕ್ರಮ ನಡೆಸಿಕೊಟ್ಟರು.

ಎಚ್.ಬಿ. ರುದ್ರಗೌಡ, ಮಂಜುನಾಥಯ್ಯ, ವಿ.ನಾಗೇಂದ್ರಪ್ಪ, ಇಕ್ಬಾಲ್ ಮಕಾಂದರ್, ಬರ್ಕಾತಾಲಿ ಮುತಾವಲಿ, ಷರೀಫ್ ಸಾಬ್, ಎಸ್. ಭೀಮಪ್ಪ, ರಫೀವುಲ್ಲಾ ಸಾಬ್, ಅಕ್ರಂ, ಚಂದ್ರಪ್ಪ ಮಾಳಗೇರ ಹಾಗೂ ಬಾನುವಳ್ಳಿ, ಎಕ್ಕೆಗೊಂದಿ, ಬ್ಯಾಲದಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.