
ತಾವರೆಕೆರೆ (ಚನ್ನಗಿರಿ): ‘ಈ ಹಿಂದೆ ಗುರುವೇ ತಸ್ಮೈ ನಮಃ ಎಂದು ಹೇಳುತ್ತಿದ್ದೆವು. ಆದರೆ, ಇಂದಿನ ದಿನಮಾನಗಳಲ್ಲಿ ‘ಗೂಗಲ್ ಸಾಕ್ಷಾತ್ ತಸ್ಮೈ ನಮಃ’ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ತಂತ್ರಜ್ಞಾನದ ಜತೆ ಬದುಕುವುದನ್ನು ಬಿಟ್ಟು ಸಾಂಸ್ಕೃತಿಕ ಹಾಗೂ ಪರಂಪರೆಯ ಸಾಂಪ್ರದಾಯಿಕ ಬದುಕಿಗೆ ಹಿಂತಿರುಗಬೇಕಾಗಿದೆ’ ಎಂದು ಎಡೆಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಸೋಮವಾರ ಸಂಜೆ ಉಮಾಮಹೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಕ್ತಿ ವಿಶಿಷ್ಟ ದ್ವೈತ ಸಿದ್ಧಾಂತವನ್ನು ಪಾಲಿಸುವವರು ವೀರಶೈವ ಮತ್ತು ಲಿಂಗಾಯತ ಸಮಾಜ. ಈ ಸಮಾಜದವರು ಸ್ತ್ರೀಯರಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ. ವೀರಶೈವ ಧರ್ಮದಲ್ಲಿ ಶಕ್ತಿ ದೇವತೆಯ ಆರಾಧನೆ ಕೂಡಾ ಮಾಡಲಾಗುತ್ತದೆ’ ಎಂದರು.
‘ಉಮಾಮಹೇಶ್ವರ ಜಾತ್ರೆಯು ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಶಿಲಾಮಠದಿಂದ ಪ್ರತಿ ವರ್ಷ ಸಿದ್ಧಲಿಂಗ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಜಿ.ಎಸ್. ಚಂದ್ರಶೇಖರ್ (ಗೆಜ್ಜಗೊಂಡನಹಳ್ಳಿ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ’ ಎಂದು ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಎನ್.ವಿ. ಗಂಗಾಧರಯ್ಯ, ನೆಲ್ಲಿಹಂಕಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎ. ದಿನೇಶ್, ಬಿ.ಜಿ. ನಾಗರಾಜ್, ಭೋಜರಾಜ್, ಎಂ.ಜಿ. ಗಿರೀಶ್, ಸರ್ಜಿ ರಮೇಶ್ ಉಪಸ್ಥಿತರಿದ್ದರು. ತುಮಕೂರಿನ ತಪೋವನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.