
ಹೊನ್ನಾಳಿ: ‘ಇರಾನ್ ದೇಶದ ಸರ್ವಾಧಿಕಾರಿ ಅಯಾತೊಲ್ಲಾ ಇಮಾಮ್ ಖಮೇನಿ ಹತ್ಯೆಯನ್ನು ಖಂಡಿಸಿ ಚಿಕ್ಕಬಳ್ಳಾಪುರ ಸೇರಿ ದೇಶದ ವಿವಿಧ ಕಡೆ ಪ್ರತಿಭಟನೆ ಮಾಡಿರುವುದು ಖಂಡನೀಯ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಂಗಳವಾರ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಬಗ್ಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇರಾನ್ ಸರ್ವಾಧಿಕಾರಿಯ ಹತ್ಯೆ ಖಂಡಿಸಿ ದೇಶದಲ್ಲಿ ಪ್ರತಿಭಟನೆ ಮಾಡುವುದು ಅರ್ಥಹೀನ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೂ ನಮ್ಮ ದೇಶಕ್ಕೂ ಏನು ಸಂಬಂಧ. ಮೊದಲು ನಮ್ಮ ದೇಶದ ಮಣ್ಣಿಗೆ ಗೌರವ ಕೊಡುವುದನ್ನು ಕಲಿಯಬೇಕು’ ಎಂದು ಹೇಳಿದರು.
‘ಪುಲ್ವಾಮದಲ್ಲಿ ನಮ್ಮ ಸೈನಿಕರು ಹತ್ಯೆಯಾದಾಗ, ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ನಮ್ಮ ಹಿಂದೂಗಳು ಹತ್ಯೆಯಾದಾಗ ಹಾಗೂ ಬಾಂಗ್ಲಾ ದೇಶದಲ್ಲಿ ನಮ್ಮ ಹಿಂದೂಗಳ ನರಮೇಧ ಆದಾಗ ಪ್ರತಿಭಟನೆಗಳನ್ನು ಮಾಡದ ಇವರು ಇರಾನ್ ಸರ್ವಾಧಿಕಾರಿ ಹತ್ಯೆಯಾದಾಗ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಖಂಡನೆ: ‘ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಹತ್ಯೆಯಾದರೆ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಪ್ರತಿಭಟನೆ ಮಾಡಿ ಅವರ ಪ್ರತಿಕೃತಿ ದಹನ ಮಾಡುತ್ತಿರುವುದು ಖಂಡನಿಯ. ದುಬೈ, ಕುವೈತ್ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ’ ಎಂದು ರೇಣುಕಾಚಾರ್ಯ ಹೇಳಿದರು.
ಮುಖಂಡರಾದ ಸಿ.ಆರ್. ಶಿವಾನಂದ್, ಮಾದೇನಹಳ್ಳಿ ನಾಗರಾಜ್, ಕತ್ತಿಗೆ ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.