ADVERTISEMENT

ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಿ– ವಿಧಾನಸಭೆಯ ಉಪಸಭಾಧ್ಯಕ್ಷ ಲಮಾಣಿ

ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:33 IST
Last Updated 9 ಫೆಬ್ರುವರಿ 2026, 8:33 IST
ರುದ್ರಪ್ಪ ಲಮಾಣಿ
ರುದ್ರಪ್ಪ ಲಮಾಣಿ   

ಹರಿಹರ (ದಾವಣಗೆರೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಏರಿಕೆ ಮಾಡಿದ ಮೀಸಲಾತಿ ಪ್ರಮಾಣವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮನವಿ ಮಾಡಿದರು.

ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಜನಜಾಗೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮೀಸಲಾತಿ ಏರಿಕೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸಿದಾಗ ಮಾತ್ರ ಮೀಸಲಾತಿ ಸೌಲಭ್ಯ ಅನುಭವಿಸಲು ಸಾಧ್ಯವಾಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಕೈಜೋಡಿಸಬೇಕು’ ಎಂದು ಹೇಳಿದರು.

ADVERTISEMENT

ಮಾಜಿ ಸಚಿವ ಶಿವನಗೌಡ ನಾಯಕ, ‘ಬೀದಿ ಹೋರಾಟ ಮಾಡಿ‌‌ ಮೀಸಲಾತಿ ಪಡೆದರೂ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಎರಡೂವರೆ ವರ್ಷ ಕಳೆದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ರಾಜಕಾರಣಿಗಳು ಪಕ್ಷ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಬದ್ಧತೆ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾಯಕ ಸಮುದಾಯ ಕೇವಲ ಮತದಾರರಾಗಿ ಬಳಕೆ ಆಗುತ್ತಿದೆ. ಏಕಲವ್ಯನ ಬೆರಳು ಪಡೆದ ಮಾದರಿಯಲ್ಲಿ ಸಮುದಾಯದ ನಾಯಕರ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಇಬ್ಬರು ಸಚಿವರು ಅಧಿಕಾರ ಕಳೆದುಕೊಂಡಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ, ‘ಶೇ 3ರಷ್ಟಿದ್ದ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಳ ಮಾಡಿದ್ದು ಬಿಜೆಪಿ. ಈ ಮೊದಲು ವಾಲ್ಮೀಕಿ ಸಮುದಾಯಕ್ಕೆ 1,888 ಎಂಜಿನಿಯರಿಂಗ್ ಮತ್ತು 278 ವೈದ್ಯಕೀಯ ಸೀಟು ಮಾತ್ರ ಲಭ್ಯವಾಗುತ್ತಿದ್ದವು. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ ಪರಿಣಾಮ 4,000 ಕ್ಕೂ ಅಧಿಕ ಎಂಜಿನಿಯರಿಂಗ್ ಹಾಗೂ 708 ವೈದ್ಯಕೀಯ ಸೀಟು ಲಭ್ಯವಾಗುತ್ತಿವೆ’ ಎಂದು ಹೇಳಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಶಾಸಕ ಪ್ರಕಾಶ ಕೋಳಿವಾಡ, ಬಿಜೆಪಿ ಮುಖಂಡ ಬಂಗಾರು ಹನುಮಂತು, ರಾಜಾ ವೇಣುಗೋಪಾಲ ನಾಯಕ ಹಾಜರಿದ್ದರು.

ಬಾಕ್ಸ್…೧

‘ಹಿಂದೂ ಧರ್ಮ ಛಿದ್ರವಾಗಬಾರದು’

‘ಜಾತಿ ಆಧಾರದ ಮೇಲೆ ಹಿಂದೂ ಧರ್ಮ ಛಿದ್ರವಾಗುವುದು ಬೇಡ. ವಾಲ್ಮೀಕಿ ಮಹರ್ಷಿ, ಸಂಗೊಳ್ಳಿ ರಾಯಣ್ಣ, ವೀರಮದಕರಿ ನಾಯಕ ಇಡೀ ಸಮಾಜಕ್ಕೆ ಸೇರಿದವರು. ಅವರನ್ನು ಜಾತಿಗೆ ಸೀಮಿತ ಮಾಡುವುದು ಬೇಡ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಸಲಹೆ‌ ನೀಡಿದರು.

‘ನಾಯಕ‌ ಸಮುದಾಯದ ಹಿನ್ನೆಲೆ ಅರಿಯಲು ರಕ್ತರಾತ್ರಿ, ದುರ್ಗಾಸ್ತಮಾನ ಸೇರಿ ಹಲವು ಕಾದಂಬರಿ ಓದಬೇಕು. ಹೋರಾಟದ ಕಿಚ್ಚು ಪರಂಪರಾಗತವಾಗಿ ಸಮುದಾಯಕ್ಕೆ ಬಂದಿದೆ. ಸ್ವಾಮೀಜಿ ಕೂಡ ದುರ್ಗಾಸ್ತಮಾನ ಕಾದಂಬರಿಯನ್ನು ಭಕ್ತರ ಕೈಗೆ‌ ಇಡಬೇಕು’ ಎಂದು ಮನವಿ ಮಾಡಿದರು.

‘1981ರ ಬಳಿಕ ವಾಲ್ಮೀಕಿ ಸಮುದಾಯಕ್ಕೆ ಹಲವು ಸೌಲಭ್ಯಗಳು ಕೈತಪ್ಪಿದವು. ಪರಿಶಿಷ್ಟ ಪಂಗಡಕ್ಕೆ ವಾಲ್ಮೀಕಿ ಸಮುದಾಯ ಸೇರಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪಾತ್ರ ದೊಡ್ಡದು. ಆದರೆ, ತಳವಾರ ಮತ್ತು ಪರಿವಾರ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿರಲಿಲ್ಲ. ಇದಕ್ಕೆ ಸಾಕಷ್ಟು ಹೋರಾಟ ಮಾಡಬೇಕಾಯಿತು’ ಎಂದು ಹೇಳಿದರು.

ಕೋಟ್…೧

ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಈ ಹೊಣೆಗಾರಿಕೆಯಿಂದ ಬಿಜೆಪಿ ನಾಯಕರು ನುಣಿಚಿಕೊಳ್ಳಬಾರದು. ಕೇಂದ್ರದ ನಾಯಕರ‌ ಮೇಲೆ ಒತ್ತಡ ತರುವ ಕೆಲಸ ಮಾಡೋಣ

ಶಿವಗೌಡ ನಾಯಕ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.