ದಾವಣಗೆರೆ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ರಾಷ್ಟ್ರಪತಿಗಳು ಅಂಕಿತ ಹಾಕಿದ ಪ್ರಯುಕ್ತ ಪ್ರಗತಿಪರ ಹೋರಾಟಗಾರರು ಟೋಪಿಗಳನ್ನು ತೆಗೆದು, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಶುಕ್ರವಾರ ಅಂಬೇಡ್ಕರ್ ವೃತ್ತದ ಬಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹುತಾತ್ಮ ರೈತರಿಗೆ ಮೌನಾಚರಣೆ ಮಾಡಲಾಯಿತು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ‘ರೈತ ಹೋರಾಟದಲ್ಲಿ ಮಡಿದವರು ನಿಜವಾದ ರೈತರಲ್ಲ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಹಾಗಾದರೆ ಬಿಜೆಪಿ ಪರ ಘೋಷಣೆ ಕೂಗುವವರು ನಿಜವಾದ ರೈತರಾ? ಕೃಷಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆಯೇ ಹೊರತು ಶಾಶ್ವತವಾಗಿ ಅಲ್ಲ. ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ರೈತರು ರಾಜಕೀಯ ಪಕ್ಷಗಳ ದಾಳವಾಗಬೇಡಿ’ ಎಂದರು.
ವಕೀಲ ಅನೀಸ್ ಪಾಷಾ ಮಾತನಾಡಿ, ‘ರೈತ ಸಮುದಾಯದ ಮೇಲೆ ಗದಾಪ್ರಹಾರದಂತೆ ಇದ್ದ ಮೂರು ಕರಾಳ ಕೃಷಿ ಕಾಯ್ದೆಯನ್ನು ಜಾರಿ ಮಾಡಿರುವುದನ್ನು ಹಿಮ್ಮೆಟ್ಟಿಸಿದ ಕೀರ್ತಿ ರೈತರಿಗೆ ಸಲ್ಲುತ್ತದೆ. ರೈತರ ನಿರಂತರ ಹೋರಾಟದಿಂದ ಮಾತ್ರ ಇದು ಸಾಧ್ಯವಾಗಿದೆ’
ಎಂದರು.
ಚಿಂತಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ,‘ರೈತರ ಧೀರ್ಘ ಕಾಲದ ಹೋರಾಟದ ಬಗ್ಗೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಕೇಂದ್ರ ಸರ್ಕಾರಗಳು ಅಣಕಿಸುತ್ತಿವೆ. ರೈತ ಹೋರಾಟದಲ್ಲಿ ಮಡಿದವರ ಕುಟುಂಬಕ್ಕೆ ಕಡ್ಡಾಯವಾಗಿ ಪರಿಹಾರ ನೀಡಲೇಬೇಕು‘ ಎಂದು ಆಗ್ರಹಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್, ‘ರೈತರ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಿ ಕಾನೂನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಚಿಂತಕರಾದ ಮುಮ್ತಾಜ್ ಬೇಗಂ, ಜಬೀನಾ ಖಾನಂ, ರೈತ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್, ಅರುಣ್ ಕುಮಾರ್ ಕುರುಡಿ, ಕತ್ತಲಗೆರೆ ತಿಪ್ಪಣ್ಣ, ಬಾಷಾ ಸಾಬ್, ಆವರಗೆರೆ ಚಂದ್ರು, ಎಚ್. ಮಲ್ಲೇಶ್, ರೇಣುಕಾ ಯಲ್ಲಮ್ಮ, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಮುಮ್ತಾಜ್ ಬೇಗಂ, ಘನಿ ತಾಹೀರ್, ಹಯಾತ್, ವಕೀಲರಾದ ರುದ್ರೇಶ್, ಅಬ್ದುಲ್ ಸಮದ್, ಖಲೀಲ್, ನೌಷಾದ್, ಮುಜಾಹಿದ್, ನಿಜಾಮುದ್ದೀನ್, ರಹಮತ್, ಮುಸ್ತಫಾ, ಯಲ್ಲಪ್ಪ, ಅಂಜಿನಪ್ಪ, ರವಿಕುಮಾರ್, ಬಸವರಾಜ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.