
ಜಗಳೂರು: ದಮನಿತ ಮಹಿಳಾ ಸಮುದಾಯಕ್ಕೆ ಶಿಕ್ಷಣ ಕಲ್ಪಿಸುವ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣ ಪ್ರಗತಿಗೆ ಪ್ರೇರಣೆಯಾಗಿದ್ದಾರೆ ಎಂದು ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ. ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ದೊಣೆಹಳ್ಳಿ ಹೊಸಹಟ್ಟಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಶತಮಾನಗಳಿಂದ ಮನುಸ್ಮೃತಿಯ ಸುಳಿಯಲ್ಲಿ ಸಿಲುಕಿ ಶೋಷಣೆಗೆ ಒಳಗಾಗಿದ್ದ ಮಹಿಳೆಯರಿಗೆ ಅಕ್ಷರ ಉಣಬಡಿಸಿ, ಸತಿಸಹಗಮನ ಪದ್ದತಿಯನ್ನು ಧಿಕ್ಕರಿಸಿ, ಅಸಮಾನತೆ, ಅಸ್ಪೃಶ್ಯತೆಗಳೆಲ್ಲವನ್ನು ತೊಡೆದುಹಾಕಿ ಸಾಮಾಜಿಕ ಸಮಾನತೆ ಸಾರಿದ್ದಾರೆ ಎಂದು ತಿಳಿಸಿದರು.
ವಿದ್ಯಾಭ್ಯಾಸದ ಹಂತದಲ್ಲಿ ವಿದ್ಯಾರ್ಥಿಗಳು ಮೂಢ ನಂಬಿಕೆ, ಮೌಡ್ಯಾಚರಣೆಗಳಿಗೆ ಒಳಗಾಗದೆ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಸಣ್ಣೋಬಯ್ಯ ಸಲಹೆ ನೀಡಿದರು
ಮಹಿಳೆಯರ ಶಿಕ್ಷಣದ ಪರಿಕಲ್ಪನೆಗೆ ಫುಲೆ ದಂಪತಿ ಮುನ್ನುಡಿ ಬರೆದರೆ, ಅಂಬೇಡ್ಕರ್ ಅವರು ನೀರೆರೆದು ಪೋಷಿಸಿದರು ಎಂದು ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಧನ್ಯಕುಮಾರ್ ಹೇಳಿದರು.
ರಾಜ್ಯದ ಅತ್ಯಂತ ಸರಳ ಸಜ್ಜನಿಕೆ ರಾಜಕಾರಣಿ ಸತೀಶ್ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ಚಳುವಳಿ ಮೂಲಕ ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ಪತ್ರಕರ್ತ ಅಣಬೂರು ಕೊಟ್ರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಅಮರೇಶ್, ಉಪ ಪ್ರಾಂಶುಪಾಲ ತಿಪ್ಪೇಸ್ವಾಮಿ, ವಕೀಲರಾದ ಮರೇನಹಳ್ಳಿ ತಿಪ್ಪೇಸ್ವಾಮಿ , ನಾಗೇಶ್, ಗೋಗುದ್ದು ತಿಪ್ಪೇಸ್ವಾಮಿ, ಮುಖಂಡ ಎಚ್. ಮಹಬೂಬ್ ಆಲಿ, ಶಿಕ್ಷಕರಾದ ದಿಲೀಪ್ ಕುಮಾರ್ , ರವಿಕುಮಾರ್, ರವೀಂದ್ರ ಪತ್ತಾರ್, ಉದಯಕುಮಾರ್, ಪ್ರಿಯಾಂಕಾ, ಸಂತೋಷ್, ಕವಿತಾ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.