
ಸಾಸ್ವೆಹಳ್ಳಿ: ಸಂತ ಸೇವಾಲಾಲರ ಜನ್ಮಸ್ಥಳ, ನ್ಯಾಮತಿ ತಾಲ್ಲೂಕು ಭಾಯಾಗಡ್ನಲ್ಲಿ ನಡೆಯಲಿರುವ ಸಂತ ಸೇವಾಲಾಲ್ ಜಯಂತಿ ಹಿನ್ನೆಲೆಯಲ್ಲಿ ಸಾಸ್ವೆಹಳ್ಳಿ ಹೋಬಳಿಯ ಉಜ್ಜನಿಪುರ ಸೇರಿದಂತೆ ಸುತ್ತಮುತ್ತಲಿನ ತಾಂಡಾಗಳಲ್ಲಿ ನೂರಾರು ಭಕ್ತರು ಮಾಲೆ ಧರಿಸಿ ಕಟ್ಟುನಿಟ್ಟಿನ ವ್ರತಾಚರಣೆಯಲ್ಲಿ ತೊಡಗಿದ್ದಾರೆ.
ಶಬರಿಮಲೆ ಸ್ವಾಮಿ ಅಯ್ಯಪ್ಪ, ಅಂಜನಾದ್ರಿಯ ಆಂಜನೇಯನ ಭಕ್ತರು ಮಾಲೆ ಧರಿಸಿ ವ್ರತ ಆಚರಿಸುವಂತೆಯೇ ಸಂತ ಸೇವಾಲಾಲರ ಭಕ್ತಸಮೂಹವೂ ಹಲವು ವರ್ಷಗಳಿಂದ ವ್ರತ ಆಚರಣೆಯಲ್ಲಿ ತೊಡಗಿದೆ.
ಸಂತ ಸೇವಾಲಾಲರ ತತ್ವ, ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಮುದಾಯದ ಜನರು ಈ ವ್ರತ ಕೈಗೊಳ್ಳುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಜೀವನದಲ್ಲಿ ಸಮೃದ್ಧಿ ಬಯಸುವ ಯುವಸಮೂಹವೇ ಅಧಿಕ ಸಂಖ್ಯೆಯಲ್ಲಿ ಮಾಲೆ ಧರಿಸಿ ವೃತ ಆಚರಣೆಯಲ್ಲಿ ತೊಡಗಿದ್ದಾರೆ.
ಮಾಲೆ ಧರಿಸಿದ ಭಕ್ತರು ನಿಯಮಿತ ಜೀವನಕ್ರಮ ಮತ್ತು ಶಿಸ್ತು ಪಾಲಿಸುತ್ತಿದ್ದಾರೆ. ಭಕ್ತರ ಸಂಕಲ್ಪಕ್ಕೆ ಅನುಗುಣವಾಗಿ ವ್ರತಾಚರಣೆ ಇದೆ. ಕೆಲವರು 21 ದಿನಗಳ ದೀರ್ಘಾವಧಿಯ ವ್ರತ ಕೈಗೊಂಡಿದ್ದರೆ, ಇನ್ನೂ ಕೆಲವರು 9, 5 ಹಾಗೂ 3 ದಿನಗಳವರೆಗೆ ಮಾಲೆ ಧರಿಸುತ್ತಾರೆ. ಶ್ರದ್ಧಾಭಕ್ತಿಯ ಸಂಕೇತವಾಗಿ ಒಂದು ದಿನ ಮಾಲೆ ಧರಿಸುವವರೂ ಇದ್ದಾರೆ ಎಂದು ಉಜ್ಜನಿಪುರದ ನವೀನಕುಮಾರ್ ಹಾಗು ಲಕ್ಷ್ಮೀಪತಿ ಮಾಹಿತಿ ನೀಡಿದ್ದಾರೆ.
ಈ ಭಾಗದ ತಾಂಡಾಗಳಲ್ಲಿ ಭಜನೆ ಮತ್ತು ಧಾರ್ಮಿಕ ಚಟುವಟಿಕೆಗಳು ದಿನನಿತ್ಯ ನಡೆಯುತ್ತಿವೆ. ಈ ಆಚರಣೆಯು ಜನರಲ್ಲಿ ಭಕ್ತಿಭಾವ ಮತ್ತು ಏಕಾಗ್ರತೆಯನ್ನು ಮೂಡಿಸುತ್ತಿದೆ ಎಂದು ಹನುಮಂತ ನಾಯ್ಕ ಹೇಳುತ್ತಾರೆ.
ಭಾಯಾಗಡಕ್ಕೆ ಪಯಣ: ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಸೂರಗೊಂಡನಕೊಪ್ಪದ ಭಾಯಾಗಡ್ನಲ್ಲಿ ಸೇವಾಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಫೆ.13ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಸಿದ್ಧತೆಯ ಮಾಡಿಕೊಳ್ಳುತ್ತಿದೆ.
ಭಕ್ತರು ಕಾಲ್ನಡಿಗೆ, ಎತ್ತಿನ ಗಾಡಿ ಹಾಗೂ ವಿವಿಧ ವಾಹನಗಳ ಮೂಲಕ ಪವಿತ್ರ ಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ತೆರಳಲಿದ್ದಾರೆ. ಫೆ.15ರಂದು ಸಂತ ಸೇವಾಲಾಲರ ದರ್ಶನ ಪಡೆದು, ಧರಿಸಿದ ಮಾಲೆಯನ್ನು ವಿಸರ್ಜಿಸುವ ಮೂಲಕ ವ್ರತ ಪೂರ್ಣಗೊಳಿಸಲಿದ್ದಾರೆ. ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.