ದಾವಣಗೆರೆ: ಜಿಲ್ಲೆಯಲ್ಲಿ 91 ವರ್ಷದವರಿಬ್ಬರೂ ಒಳಗೊಂಡಂತೆ 61 ಹಿರಿಯರು ಸೇರಿ 228 ಮಂದಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ.
ಸಿದ್ದವೀರಪ್ಪ ಬಡಾವಣೆಯ 64 ವರ್ಷದ ವೃದ್ಧ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ 89 ವರ್ಷದ ವೃದ್ಧ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಆ.16ರಂದು ಮೃತಪಟ್ಟಿದ್ದಾರೆ. ನಿಟುವಳ್ಳಿಯ 42 ವರ್ಷದ ಪುರುಷ ಮತ್ತು ಆವರಗೆರೆಯ 58 ವರ್ಷದ ಪುರುಷ ಆ.18ರಂದು ನಿಧನರಾಗಿದ್ದಾರೆ.
ಕೆ.ಬಿ. ಬಡಾವಣೆಯ 64 ವರ್ಷದ ವೃದ್ಧ ಮೂತ್ರಪಿಂಡದ ಸಮಸ್ಯೆ, ಮಧುಮೇಹ, ಇತರ ಕಾಯಿಲೆಗಳಿಂದ ಬಳಲುತ್ತಿದ್ದು ಆ.19ರಂದು ಮೃತಪಟ್ಟರು. ಮಧುಮೇಹದಿಂದ ಬಳಲುತ್ತಿದ್ದ ಜಗಳೂರು ಕಮಂಡಲಗುಂಡಿಯ 60 ವರ್ಷದ ವೃದ್ಧೆ, ಪಿ.ಬಿ. ರಸ್ತೆಯ 56 ವರ್ಷದ ಪುರುಷ ನಿಧನರಾದರು. ಈ ಎಲ್ಲರಿಗೂ ಉಸಿರಾಟದ ಸಮಸ್ಯೆ ಇತ್ತು. ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
40 ವೃದ್ಧರು, 21 ವೃದ್ಧೆಯರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. 6 ಬಾಲಕರು, 11 ಬಾಲಕಿಯರಿಗೂ ಕೊರೊನ ಬಂದಿದೆ. 18ರಿಂದ 59 ವರ್ಷದೊಳಗಿನ 78 ಪುರುಷರು, 72 ಮಹಿಳೆಯರಿಗೆ ಸೋಂಕು ಇರುವುದು ಖಚಿತವಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 115 ಮಂದಿಗೆ ವೈರಸ್ ತಗುಲಿದೆ. ಎಲೆಬೇತೂರು, ಕುಕ್ಕವಾಡ, ದೊಡ್ಡಬಾತಿಯ ತಲಾ ನಾಲ್ವರು, ಕೋಡಿಹಳ್ಳಿಯ ಮೂವರು, ಶಿರಮಗೊಂಡನಹಳ್ಳಿ, ಆನಗೋಡಿನ ತಲಾ ಇಬ್ಬರಿಗೆ, ಹಳೇಬಾತಿ, ನರಗನಹಳ್ಳಿ, ಯರನಾಕನಹಳ್ಳಿ, ಶ್ಯಾಗಲೆಯ ತಲಾ ಒಬ್ಬರಿಗೆ ಕೊರೊನಾ ಬಂದಿದೆ. ಉಳಿದ 92 ಮಂದಿ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯವರಾಗಿದ್ದಾರೆ. ನಿಟುವಳ್ಳಿ, ಶ್ರೀರಾಮನಗರ, ವಿದ್ಯಾನಗರ, ಶಿವಕುಮಾರ ಬಡಾವಣೆಗಳಲ್ಲಿ ಅಧಿಕ ಪ್ರಕರಣಗಳು ಕಂಡು ಬಂದಿವೆ.
ಚನ್ನಗಿರಿ ತಾಲ್ಲೂಕಿನಲ್ಲಿ 49, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 37, ಹರಿಹರ ತಾಲ್ಲೂಕಿನಲ್ಲಿ 12, ಜಗಳೂರು ತಾಲ್ಲೂಕಿನಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಇಬ್ಬರು, ಕುರಗುಂದದ ಒಬ್ಬರು, ಹರಪನಹಳ್ಳಿ, ಶಿವಮೊಗ್ಗ ಚಿತ್ರದುರ್ಗದ ಒಬ್ಬರಿಗೆ ಕೊರೊನಾ ಬಂದಿದೆ.
8 ವೃದ್ಧರು, ಇಬ್ಬರು ವೃದ್ಧೆಯರು, ಒಬ್ಬ ಬಾಲಕ, ಒಬ್ಬ ಬಾಲಕಿ ಸೇರಿ 66 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 6011 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 3861 ಮಂದಿ ಗುಣಮುಖರಾಗಿದ್ದಾರೆ. 136 ಮಂದಿ ಮೃತಪಟ್ಟಿದ್ದಾರೆ. 2014 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.