
ದಾವಣಗೆರೆಯ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಸಲ್ಲಿಸಲಾಯಿತು
ದಾವಣಗೆರೆ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಅವರಂತಹ ವ್ಯಕ್ತಿ ಸಿಗುವುದು ಅಪರೂಪ ಎಂದು ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ಅಧ್ಯಕ್ಷ ಅಥಣಿ ವೀರಣ್ಣ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆಯ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವಶಂಕರಪ್ಪ ಅವರೊಂದಿಗಿನ ಒಡನಾಟ ಅಪಾರ ಅನುಭವ ನೀಡಿದೆ. ದಾವಣಗೆರೆಯ ಅನ್ವರ್ಥ ನಾಮದಂತೆ ಬದುಕಿದ್ದ ಅವರು ನಗರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಅವರನ್ನು ಕಳೆದುಕೊಂಡು ಶೂನ್ಯ ಅವರಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪುರುವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ಶಿವಶಂಕರಪ್ಪ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಂಚಪೀಠಗಳನ್ನು ಒಗ್ಗೂಡಿಸಲು ಸಮಾವೇಶ ಆಯೋಜಿಸಿದ್ದರು. ಭಕ್ತರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದರು’ ಎಂದರು.
ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ಕಾರ್ಯದರ್ಶಿ ಎನ್. ಅಡಿವೆಪ್ಪ, ಪದಾಧಿಕಾರಿಗಳಾದ ವೈ.ಬಿ. ಸತೀಶ್, ಅಮರಯ್ಯ ಗುರುವಿನ ಮಠ, ಎನ್.ಎ. ಗಿರೀಶ್, ಎಸ್.ಜಿ. ಉಳವಯ್ಯ, ಶಿವಪುತ್ರಪ್ಪ ಶಿಂಗಾಡಿ, ನರೇಂದ್ರ ಪ್ರಕಾಶ್, ಎಸ್. ಓಂಕಾರಪ್ಪ ಹಾಜರಿದ್ದರು.