ಚನ್ನಗಿರಿ: ತಾಲ್ಲೂಕು ಉಬ್ರಾಣಿ ಗ್ರಾಮದ ಈಶ್ವರ ದೇವಾಲಯದೊಳಗೆ ಕಿಡಿಗೇಡಿಗಳು ಪಾದರಕ್ಷೆಯನ್ನು ಹಾಕಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಜನರ ಆರಾಧ್ಯ ದೈವವಾದ ಈಶ್ವರ ದೇವಾಲಯದಲ್ಲಿ ಮಂಗಳವಾರ ರಾತ್ರಿ ದೇವರ ಪೂಜೆಯನ್ನು ಮಾಡಿದ ನಂತರ ಆರ್ಚಕ ದೇವಾನಂದ್ ಅವರು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದರು. ಮತ್ತೆ ಬುಧವಾರ ಬೆಳಿಗ್ಗೆ ದೇವಾಲಯದ ಬಾಗಿಲ ಬೀಗವನ್ನು ತೆಗೆದು ಒಳ ಹೋದಾಗ ದೇವಸ್ಥಾನದೊಳಗೆ ಪಾದರಕ್ಷೆಯೊಂದು ಬಿದ್ದಿರುವುದನ್ನು ಕಂಡು ಗ್ರಾಮದ ಜನಕ್ಕೆ ಮಾಹಿತಿ ನೀಡಿ, ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯಾರೋ ಕಿಡಿಗೇಡಿಗಳು ಮಂಗಳವಾರ ರಾತ್ರಿ ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ತರಲು ಹಾಗೂ ಗ್ರಾಮದಲ್ಲಿ ಅಶಾಂತಿಯನ್ನು ಮೂಡಿಸಲು ಪಾದರಕ್ಷೆಯನ್ನು ದೇವಸ್ಥಾನದೊಳಗೆ ಹಾಕಿ ಹೋಗಿದ್ದಾರೆ ಎಂದು ದೇವಸ್ಥಾನ ಸಮಿತಿ ಮುಖಂಡ ತಿಪ್ಪೇಶ್ ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಪಿಐ ಕೆ.ಎನ್. ರವೀಶ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಪಾದರಕ್ಷೆಯನ್ನು ಹಾಕಿದವರು ಕಂಡು ಹಿಡಿದು ಸೂಕ್ತ ಶಿಕ್ಷೆಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.