ADVERTISEMENT

ರೇಷ್ಮೆ ಮಾರುಕಟ್ಟೆಯ ವಂಚನೆಗೆ ವಾರದೊಳಗೆ ಕಡಿವಾಣ

ರೇಷ್ಮೆ, ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 6:19 IST
Last Updated 1 ಸೆಪ್ಟೆಂಬರ್ 2021, 6:19 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೇಷ್ಮೆ ಹಾಗೂ ಕ್ರೀಡಾ ಇಲಾಖೆ ಕುರಿತು ನಡೆದ ಸಭೆಯಲ್ಲಿ ರೇಷ್ಮೆ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಅವರು ಜಿಲ್ಲಾಮಟ್ಟದ ಉತ್ತಮ ರೇಷ್ಮೆ ಬೆಳೆಗಾರ ಪ್ರಶಸ್ತಿಯನ್ನು ಜಗಳೂರಿನ ಜೆ.ವಿ. ಕೋಟೇಶ್ವರ ಮತ್ತು ಎಸ್.ಕೆ. ಮಹದೇವಪ್ಪ ಅವರಿಗೆ ನೀಡಿ ಸನ್ಮಾನಿಸಿದರು.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೇಷ್ಮೆ ಹಾಗೂ ಕ್ರೀಡಾ ಇಲಾಖೆ ಕುರಿತು ನಡೆದ ಸಭೆಯಲ್ಲಿ ರೇಷ್ಮೆ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಅವರು ಜಿಲ್ಲಾಮಟ್ಟದ ಉತ್ತಮ ರೇಷ್ಮೆ ಬೆಳೆಗಾರ ಪ್ರಶಸ್ತಿಯನ್ನು ಜಗಳೂರಿನ ಜೆ.ವಿ. ಕೋಟೇಶ್ವರ ಮತ್ತು ಎಸ್.ಕೆ. ಮಹದೇವಪ್ಪ ಅವರಿಗೆ ನೀಡಿ ಸನ್ಮಾನಿಸಿದರು.   

ದಾವಣಗೆರೆ: ರೇಷ್ಮೆಯ ಪ್ರಮುಖ ಮಾರುಕಟ್ಟೆಯಾದ ರಾಮನಗರದಲ್ಲಿ ರೈತರಿಗೆ ವ್ಯಾಪಾರಿಗಳಿಂದ ವಂಚನೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.ಈ ಎಲ್ಲ ವಂಚನೆಗಳಿಗೆ ವಾರದ ಒಳಗೆ ಕಡಿವಾಣ ಹಾಕಲಾಗುವುದು ಎಂದು ರೇಷ್ಮೆ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರೇಷ್ಮೆ ಹಾಗೂ ಯುವ ಸಬಲೀಕರಣ, ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹಾವೇರಿ, ದಾವಣಗೆರೆಯ ರೈತರು ಕೂಡ ವಂಚನೆಯ ಬಗ್ಗೆ ದೂರಿದ್ದಾರೆ. ಮೊದಲು ಒಂದು ದರ ಹೇಳಿ, ರೇಷ್ಮೆ ಗೂಡು ಖರೀದಿಸುವ ವೇಳೆ ಮತ್ತೊಂದು ದರ ನೀಡುವುದು, ಒಂದೆರಡು ಕೆ.ಜಿ. ಗೂಡುಗಳನ್ನು ಉಚಿತವಾಗಿ ಪಡೆಯುವುದು ಸಹಿತ ಎಲ್ಲ ವಂಚನೆಗಳ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳ ಜತೆಗೆ ಖುದ್ದು ಭೇಟಿ ನೀಡಿ ಈ ವಂಚನೆಗೆ ಕಡಿವಾಣ‌ ಹಾಕಲಾಗುವುದು ಎಂದು ಹೇಳಿದರು.

ADVERTISEMENT

ರೇಷ್ಮೆ ಶೆಡ್‌ಗಳನ್ನು ರೈತರಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆಯಬಾರದು. ಈ ರೀತಿ ಅವ್ಯವಹಾರ ನಡೆಸಿದ ಕೆಲವರ ವಿವರ ದೊರೆತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 817 ಎಕರೆ ಪ್ರದೇಶದಲ್ಲಿ ಸುಮಾರು 450 ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿ ನಡೆಸುತ್ತಿದ್ದು, ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿದ್ದಾರೆ. ಜಿಲ್ಲೆ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳು, ಮಹಾರಾಷ್ಟ್ರ ರಾಜ್ಯದಿಂದಲೂ ಕೂಡ ರೇಷ್ಮೆ ಗೂಡಿನ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿಯೇ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜಗಳೂರು, ದಾವಣಗೆರೆ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಸುಮಾರು 122 ಗ್ರಾಮಗಳಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಉತ್ತಮ ಗುಣಮಟ್ಟದ ರೇಷ್ಮೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದೆ. ವರ್ಷಕ್ಕೆ ಹತ್ತು ಬೆಳೆ ತೆಗೆಯುತ್ತಿರುವ, ಎಕರೆಗೆ ₹ 5 ಲಕ್ಷ ಆದಾಯ ಗಳಿಸುತ್ತಿರುವ ರೈತರನ್ನು ಗುರುತಿಸಿ ರಾಜ್ಯ ಸರ್ಕಾರದಿಂದ ಸನ್ಮಾನ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು. ಇದರಲ್ಲಿ ರೈತರಿಗೆ ವಾಸ್ತವ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸುಸಜ್ಜಿತ ಲಾಕರ್, ಗೋಡೌನ್, ರ‍್ಯಾಕ್ ಸಹಿತ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ 5 ಎಕರೆ ಜಾಗ ಗುರುತಿಸಿ, ಪ್ರಸ್ತಾವ ಸಲ್ಲಿಸಿ. ಚನ್ನಗಿರಿ, ತೋಳಹುಣಸೆ ಸಹಿತ ವಿವಿಧೆಡೆ ರೇಷ್ಮೆಗೆ ಸಂಬಂಧಿಸಿದಂತೆ ಇರುವ ಜಮೀನನ್ನು ರೈತರಿಗೆ ಲೀಸ್‌ನಲ್ಲಿ ನೀಡಿ ಕೃಷಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ‘ಈ ಹಿಂದೆ ಇಲ್ಲಿನ ಎಪಿಎಂಸಿ ನಲ್ಲಿ ರೇಷ್ಮೆ ಮಾರುಕಟ್ಟೆ ಇತ್ತು. ಸದ್ಯ ಅದು ಬಂದ್ ಆಗಿದೆ. ಪುನರಾರಂಭಕ್ಕೆ ಬೇಡಿಕೆ ಇದೆ’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ. ಉಪಕಾರ್ಯದರ್ಶಿ ಆನಂದ್ ಅವರೂ ಇದ್ದರು.

‘ಮಾಯಕೊಂಡ, ನ್ಯಾಮತಿಗಳಲ್ಲೂ ಕ್ರೀಡಾಂಗಣ’

ದಾವಣಗೆರೆ: ಜಿಲ್ಲೆಯಲ್ಲಿ ₹ 7 ಕೋಟಿ ಅಂದಾಜು ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಿಸಲಾಗುವುದು. ಮಾಯಕೊಂಡ ಹಾಗೂ ನ್ಯಾಮತಿಗಳಲ್ಲಿ ಕ್ರೀಡಾಂಗಣ ಹಾಗೂ ಜಗಳೂರಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.

ಸರ್ಕಾರಿ ಕ್ರೀಡಾಂಗಣಗಳಲ್ಲಿ ಹೆಣ್ಣು ಮಕ್ಕಳಿಗೆ ಜಿಮ್ ನಿರ್ಮಿಸಿದ್ದರೂ ಸಹ, ಬರುವವರ ಸಂಖ್ಯೆ ಕಡಿಮೆ ಇದೆ. ಜಿಮ್‌ಗಳ ಉನ್ನತೀಕರಿಸಿ ಹೆಣ್ಣ ಮಕ್ಕಳು ಬರುವಂತೆ ಮಾಡಬೇಕು ಎಂದರು.

ದಾವಣಗೆರೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣವು ಸರ್ಕಾರದ ಅನುದಾನದ ಹಂಗಿಲ್ಲದೆ, ಸಂಗ್ರಹಿತ ಶುಲ್ಕ ಹಾಗೂ ಸದಸ್ಯತ್ವ ಸಂಪನ್ಮೂಲದಿಂದಲೇ ನಡೆಯುತ್ತಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಮಾಹಿತಿ ನೀಡಿದರು.

ಈಜುಕೊಳವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಉನ್ನತೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.