ದಾವಣಗೆರೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆಯಾಗಿದೆ. ಜಲಮೂಲಗಳ ಒಡಲು ಸೇರಬೇಕಿದ್ದ ಆ ನೀರು ಸಮುದ್ರದ ಪಾಲಾಗಿದೆ. ಹೂಳು, ಒತ್ತುವರಿ, ಕಳೆ ಗಿಡಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಕೆರೆಗಳಲ್ಲಿ ಈ ವರ್ಷವೂ ನಿರೀಕ್ಷಿಸಿದಷ್ಟು ನೀರು ಸಂಗ್ರಹವಾಗಿಲ್ಲ.
ಸಮೃದ್ಧ ಮಳೆ ಬಂದರೂ ಕೆಲವೆಡೆ ಅಂತರ್ಜಲ ಮರುಪೂರಣಕ್ಕೆ ಕೆರೆಯ ಹೂಳು ಅಡ್ಡಿಯಾಗಿದೆ. ಪರಿಣಾಮ ಕೃಷಿ ಚಟುವಟಿಕೆಗೆ ಹಿನ್ನೆಡೆ ಉಂಟಾಗುತ್ತಿದೆ. ಕೆಲವು ಕೆರೆಗಳು ಕಾಲಕಲ್ಪ ಕಂಡಿದ್ದು, ಮೈದುಂಬಿ ನಳನಳಿಸುತ್ತಿವೆ. ಗ್ರಾಮೀಣ ಭಾಗದ ಪ್ರಮುಖ ಜಲಮೂಲಗಳಾದ ಕೆರೆ, ಕಟ್ಟೆಗಳಿಗೆ ಮರುಜೀವ ತುಂಬಲು ವಿವಿಧ ಸಂಘ ಸಂಸ್ಥೆಗಳು, ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ.
ಜಿಲ್ಲೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ (ಪಿಆರ್ಇಡಿ) ಹಾಗೂ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಒಟ್ಟು 254 ಕೆರೆಗಳಿವೆ. ಒಂದು ಎಕರೆಯಿಂದ 40 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಗಳು ಪಿಆರ್ಇಡಿ ವ್ಯಾಪ್ತಿಗೂ, 40 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಬಹುಪಾಲು ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದ್ದು, ಪ್ರಸಕ್ತ ವರ್ಷ ಜಿಲ್ಲಾ ಪಂಚಾಯಿತಿಯಿಂದ 152 ಕೆರೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಕೆರೆಯ ಪೂರಕ ನಾಲೆ ಅಭಿವೃದ್ಧಿ, ಕೋಡಿ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಇಂತಹ ಕಾರ್ಯಗಳ ನಡುವೆಯೂ ಹಲವು ಕೆರೆಗಳು ಅಭಿವೃದ್ಧಿಯ ಲವಲೇಶವೂ ಕಾಣದೆ ಸೊರಗಿವೆ. ನೀರಾವರಿ ಇಲಾಖೆಗೆ ಒಳಪಟ್ಟ ಸೂಳೆಕೆರೆ (ಶಾಂತಿಸಾಗರ) ಹಾಗೂ ಡಿ.ಬಿ. ಕೆರೆ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕೆರೆಗಳೆನಿಸಿವೆ. ಈ ಕೆರೆಗಳು ಒತ್ತುವರಿ, ಹೂಳು, ಗಿಡ–ಗಂಟಿಗಳ ಹಾವಳಿಗೆ ಸಿಲುಕಿ ನಲುಗುತ್ತಿವೆ. ಬಹುತೇಕ ಕೆರೆಗಳಲ್ಲಿ 3ರಿಂದ 4 ಅಡಿ ಹೂಳು ಶೇಖರವಾಗಿದ್ದು, ಸಮರ್ಪಕ ನೀರು ಸಂಗ್ರಹಣೆ ಸಾಧ್ಯವಾಗುತ್ತಿಲ್ಲ.
ದಾವಣಗೆರೆಯ ಅಣಜಿ ಕೆರೆ, ಮಲೇಬೆನ್ನೂರು ಸಮೀಪದ ಮುದ್ದಪ್ಪನ ಕೆರೆ, ಮಾಯಕೊಂಡದ ಹೊಸಕೆರೆ ಹೀಗೆ ಜಿಲ್ಲೆಯ ಹಲವು ಪ್ರಮುಖ ಕೆರೆಗಳು ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಇನ್ನು ಬಹುತೇಕ ಸಣ್ಣ ಕೆರೆಗಳು ಸಣ್ಣ ಕುರುಹೂ ಇಲ್ಲದೆ ಅಸ್ತಿತ್ವ ಕಳೆದುಕೊಂಡಿವೆ.
ಕೆರೆಗಳಿಗೆ ನೀರು ಹರಿದುಬರುವ ಬಹುತೇಕ ಕಾಲುವೆಗಳು ಒತ್ತುವರಿಗೆ ತುತ್ತಾಗಿವೆ. ಇದರಿಂದ ಕೆರೆಗಳಿಗೆ ನೀರು ಹರಿದುಬರಲು ಹಿನ್ನಡೆಯಾಗಿದೆ. ಬಹುತೇಕ ಕಡೆ ಕೆರೆಗಳ ನಾಮಫಲಕ ಅಳವಡಿಸಿಲ್ಲ. ಕೆರೆಗಳ ಗಡಿ ಗುರುತಿಸಿಲ್ಲ. ಗ್ರಾಮ, ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬಹುತೇಕ ಕೆರೆಗಳಿಗೆ ತ್ಯಾಜ್ಯ ನೀರು ಹರಿದು ದುರ್ವಾಸನೆ ಬೀರುತ್ತಿದ್ದು, ರೋಗಗಳನ್ನು ಹರಡುವ ತಾಣಗಳಾಗುತ್ತಿವೆ. ಇಂತಹ ಕೆರೆಗಳನ್ನು ಗುರುತಿಸಿ ಕಾಯಕಲ್ಪ ನೀಡುವ ಸಂಕಲ್ಪ ಬೇಕಿದೆ.
‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಜಿಲ್ಲೆಯಲ್ಲಿ ಈವರೆಗೆ 24 ಕೆರೆಗಳನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆ ಅಡಿ ಪ್ರತಿ ವರ್ಷ 5ರಿಂದ 7 ಕೆರೆಗಳು ಜಿಲ್ಲೆಯಲ್ಲಿ ಪುನಶ್ಚೇತನಗೊಳ್ಳುತ್ತಿವೆ. ಗ್ರಾಮ ಪಂಚಾಯಿತಿ, ಇತರ ಸಂಘ– ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆರೆಯ ಹೂಳನ್ನು ತೆಗೆಯಲು ಅಗತ್ಯವಾಗಿರುವ ಹಿಟಾಚಿಯ ಸೌಲಭ್ಯವನ್ನು ಧರ್ಮಸ್ಥಳ ಯೋಜನೆ ಒದಗಿಸುತ್ತದೆ.
‘ಕೆರೆ ಪುನಶ್ಚೇತನ ಮಾಡಿಕೊಳ್ಳಲು ಆಸಕ್ತಿ ಇರುವ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ತೆಗೆದ ಹೂಳಿನ ವಿಲೇವಾರಿ ಜವಾಬ್ದಾರಿ ಗ್ರಾಮಸ್ಥರದ್ದು. ಕೆರೆ ಅಭಿವೃದ್ಧಿಗೂ ಮುನ್ನ ಕೆರೆ ಸಮಿತಿ ರಚಿಸಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಡಲಾಗುವುದು. ಆನಂತರವೂ ಕೆರೆ ಉಸ್ತುವಾರಿಯನ್ನೂ ಗ್ರಾಮಸ್ಥರಿಗೇ ವಹಿಸಲಾಗುವುದು’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ದಾವಣಗೆರೆ ಪ್ರಾದೇಶಿಕ ಎಂಜಿನಿಯರ್ ಹರೀಶ್ ನಾಯ್ಕ ಮಾಹಿತಿ ನೀಡಿದರು.
ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳೂ ತುಂಬಿವೆ. ಕೆಲವೆಡೆ ಒತ್ತುವರಿ ಸಮಸ್ಯೆಯಿಂದ ತಕ್ಕಷ್ಟು ನೀರು ಹರಿದಿಲ್ಲ. ಅಂತಹ ಕೆರೆಗಳನ್ನು ಗುರುತಿಸಿ ತೆರವು ಕಾರ್ಯ ಕೈಗೊಳ್ಳಲಾಗುವುದು.ಸುರೇಶ್ ಇಟ್ನಾಳ್ ಜಿಲ್ಲಾ ಪಂಚಾಯಿತಿ ಸಿಇಒ
ಕಾಲ ಕಾಲಕ್ಕೆ ಬಾಕಿ ಇರುವ ಕೆರೆಗಳ ಹೂಳನ್ನು ಎತ್ತುವ ಮೂಲಕ ರೈತರ ಬದಕು ಹಸನು ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕುಮಂಜುನಾಥ್ ಆಗರಬನ್ನಿಹಟ್ಟಿ ಚನ್ನಗಿರಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.