ಉಚ್ಚಂಗಿದುರ್ಗ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಣಿಕೆ ಹುಂಡಿ ಎಣಿಕೆಯಲ್ಲಿ ಹರಕೆ ಪತ್ರಗಳು ಗಮನ ಸೆಳೆದವು.
ಮುಜರಾಯಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪಕ ಸೇವಾ ಸಮಿತಿ ನೇತೃತ್ವದ ಎಣಿಕೆ ಕಾರ್ಯದಲ್ಲಿ ಕೇವಲ 3 ತಿಂಗಗಳಲ್ಲಿ ₹ 20,70,890 ಸಂಗ್ರಹವಾಗಿದೆ.
ದಾಸೋಹ ಹುಂಡಿ: ದಾಸೋಹ ಕಾರ್ಯಕ್ರಮಕ್ಕೆ ಪ್ರತ್ಯೇಕ ಹುಂಡಿ ಇಡಲಾಗಿದ್ದು, ಎಣಿಕೆಯಲ್ಲಿ ₹ 1,84,685 ಸಂಗ್ರಹವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ದಾಸೋಹ ನಡೆಸಲಾಗುತ್ತಿದೆ.
ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಹರಕೆ ಪತ್ರ: ಹುಂಡಿಯಲ್ಲಿ ಕಂಡ ಹರಕೆ ಪತ್ರಗಳು ಗಮನ ಸೆಳೆದವು. ಭಕ್ತರೊಬ್ಬರು ‘ಎರಡು ತಿಂಗಳಲ್ಲಿ ಉತ್ತಮ ಸಂಸ್ಕಾರವುಳ್ಳ ಕನ್ಯೆ ಸಿಕ್ಕಿ ವಿವಾಹವಾಗಿ, ನನಗೆ ಇರುವ ದುಷ್ಟರು ದೂರವಾಗುವ ರೀತಿಯಲ್ಲಿ ದೇವಿ ಕೃಪೆ ತೋರಿದರೆ ಊಹಿಸಲಾಗದ ಭಕ್ತಿ ಅರ್ಪಿಸುತ್ತೇನೆ’ ಎಂದು ಬರೆದಿದ್ದಾರೆ.
ಭಕ್ತೆಯೊಬ್ಬರು, 'ತನಗಿರುವ ಆರೋಗ್ಯದ ಸಮಸ್ಯೆ ದೂರವಾಗಿ, ಮಕ್ಕಳ ಓದಿನ ಭವಿಷ್ಯ ಉತ್ತಮವಾಗಿ ಸಾಗಿದರೆ, ಎರಡು ಚಿನ್ನದ ತಾಳಿ ಅರ್ಪಿಸುತ್ತೇನೆ’ ಎನ್ನುವ ಪತ್ರಗಳು ಪತ್ತೆಯಾದವು.
ಕಂದಾಯ ನಿರೀಕ್ಷಕ ಶ್ರೀಧರ್, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಕೊಟ್ರೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ಸತೀಶ್, ತೆಗ್ಗಿನಮನೆ ರಮೇಶ್, ಸಮಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಸದಸ್ಯರಾದ ಕೆ. ಸಿದ್ದೇಶ್ವರಗೌಡ, ಸಿದ್ದಲಿಂಗಪ್ಪ, ದಂಡ್ಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.