ದಾವಣಗೆರೆ: ‘ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಯನ್ನು ವಾಪಸ್ ಪಡೆದರೂ ಅವರದೇ ಸರ್ಕಾರ ರಾಜ್ಯದಲ್ಲಿ ವಾಪಸ್ ಪಡೆದಿಲ್ಲ. ಸಚಿವ ಸಂಪುಟದ ಸದಸ್ಯರು ಉದ್ಧಟತನ ತೋರಿಸುತ್ತಿದ್ದಾರೆ. ಜನಹಿತ ಬಯಸದ ಸರ್ಕಾರಗಳನ್ನು ಕೆಳಗಿಳಿಸುವ ಕಾಲ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು.
‘ಇಂದಿನ ಬಿಜೆಪಿ ಸರ್ಕಾರ ಜನಹಿತವನ್ನು ಬಯಸುತ್ತಿಲ್ಲ. ಸ್ವಾತಂತ್ರ್ಯ ನಂತರ ಜವಾಹರಲಾಲ್ ನೆಹರೂ ಕುಟುಂಬದಿಂದ ದೇಶಕ್ಕೆ ಗಂಡಾಂತರ ಬಂದಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಇದು 20 ಪಟ್ಟು ಗಂಭೀರವಾಗಿದೆ. ಇವರ ಸಿದ್ದಾಂತಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ ಕೊಂಡೊಯ್ಯುತ್ತಿವೆ. ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಇಂದಿನ ಆತಂಕಕಾರಿ ಸರ್ಕಾರ ಇದನ್ನು ತೊಲಗಿಸಲು ಜನರು ಗಂಭೀರವಾಗಿ ಚಿಂತಿಸಬೇಕಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
11ರಂದು ಜಾಥಾಗಳ ಸಮಾಗಮ:
ಆಜಾದಿಸೇ ಸ್ವರಾಜ್ ರಾಷ್ಟ್ರಮಟ್ಟದ ಅಭಿಯಾನದ ಅಂಗವಾಗಿ ಕೂಡಲ ಸಂಗಮ, ಮಂಗಳೂರು, ಕುಸೂರು, ಕೋಲಾರದಿಂದ ಆರಂಭಗೊಂಡಿರುವ ಯಾತ್ರೆಗಳು ಜ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದ್ದು, ಅಂದು ಜಾಥಾಗಳ ಸಮಾಗಮ ಸತ್ಯಾಗ್ರಹ ಸಮಾವೇಶ ನಡೆಯಲಿದೆ. ಸಮಾರೋಪದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್, ಪ್ರಗತಿಪರ ಚಿಂತಕ ಜಿ. ರಾಮಕೃಷ್ಣ ಇತರರು ಭಾಗವಹಿಸುವರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.