ADVERTISEMENT

‘ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಅಧಿಕಾರ ಬೇಡ’

ಮೀಸಲಾತಿ ನೀಡದಿದ್ದರೆ ನನಗೂ ಏನೂ ಬೇಡ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:57 IST
Last Updated 3 ನವೆಂಬರ್ 2019, 19:57 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಹರಿಹರ: ‘ಎರಡು ತಿಂಗಳಲ್ಲಿ ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿಯನ್ನು ನೀಡಬೇಕು. ಇಲ್ಲದಿದ್ದರೆ ನನಗೂ ಅಧಿಕಾರ ಬೇಡ’ ಎಂದು ಸಚಿವ ಶ್ರೀರಾಮುಲು ಇಲ್ಲಿ ಹೇಳುವ ಮೂಲಕ ಸರ್ಕಾರದಿಂದ ಹೊರಬರುವ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಾತ್ರೆ ಪೂರ್ವ ಸಿದ್ಧತಾ ಸಭೆ ಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡಬೇಕು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ವರದಿ ಎರಡು ತಿಂಗಳಲ್ಲಿ ಬರಲಿದೆ. ವರದಿ ಬಂದ ತಕ್ಷಣವೇ ಮೀಸಲಾತಿ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಬಳಿಗೆ ನಿಯೋಗ ಒಯ್ಯಲಾಗುವುದು. ಸಮಾಜಕ್ಕೆ ಮೀಸಲಾತಿ ನೀಡದ ಹೊರತೂ ನಮಗೂ ಏನು ಬೇಡ ಎಂದು ಸ್ಪಷ್ಟಪಡಿಸುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು. ‘ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮಾಜದಿಂದ ಮೂವರು ಸಚಿವರಾಗಬೇಕು ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ನಾವೂ ಪ್ರಯತ್ನ ಮಾಡುತ್ತೇವೆ’ ಎಂದರು.

ADVERTISEMENT

‘ಜಾತ್ರೆಗೆ ಮುನ್ನ ಮೀಸಲಾತಿ ನೀಡಿ’
‘ರಾಜನಹಳ್ಳಿಯಲ್ಲಿ ಮುಂದಿನ ಫೆಬ್ರುವರಿ 8 ಮತ್ತು 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ಆ ಜಾತ್ರೆಗೆ ಸರ್ಕಾರದ ಜವಾಬ್ದಾರಿ ಹುದ್ದೆಯಲ್ಲಿರುವ ಪ್ರತಿನಿಧಿಗಳು ಬಂದು ಮೀಸಲಾತಿಯನ್ನು ಘೋಷಣೆ ಮಾಡಬೇಕು’ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ಈ ವರ್ಷದ ವಾಲ್ಮೀಕಿ ಜಾತ್ರೆಯು ನಮ್ಮ ಸಮಾಜಕ್ಕೆ ಶೇ 7.5 ಮೀಸಲಾತಿ ಕೊಡಿಸಬೇಕು ಎಂಬ ಏಕೈಕ ಉದ್ದೇಶದೊಂದಿಗೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.