ADVERTISEMENT

ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಆರಂಭಿಸಲಿ: ಜೆಡಿಎಸ್‌ ಮುಖಂಡ ಕಲ್ಲೇರುದ್ರೇಶ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 4:40 IST
Last Updated 13 ಜುಲೈ 2021, 4:40 IST

ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲುಜನಪ್ರತಿನಿಧಿಗಳು ಈಗಲಾದರೂ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆ. ನಗರದಲ್ಲಿ ವೈದ್ಯಕೀಯ ಕಾಲೇಜಿನ ಜತೆ ಕಾರ್ಮಿಕರ ವೈದ್ಯಕೀಯ ಕಾಲೇಜನ್ನೂ ತೆರೆಯಬೇಕು. ಈ ಬಗ್ಗೆ ಸಂಸದರು ಗಮನಹರಿಸಬೇಕು ಎಂದು ಜೆಡಿಎಸ್‌ ಮುಖಂಡ ಕಲ್ಲೇರುದ್ರೇಶ್‌ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಈಗಲಾದರೂ ಅದರ ಬಗ್ಗೆ ಜನರಿಗೆ, ಜನಪ್ರತಿನಿಧಿಗಳಿಗೆ ಅರಿವು ಮೂಡಿದ್ದು ಸ್ವಾಗತಾರ್ಹ. ವೈದ್ಯಕೀಯ ಕಾಲೇಜಿನ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಸಿ.ಜಿ. ಆಸ್ಪತ್ರೆಗೆ ಜಾಗ ನೀಡಿದ ಮನೆತನದವರನ್ನೂ ಸ್ಮರಿಸಬೇಕು. ಕಾರ್ಮಿಕ ಕಾಲೇಜು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಈ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ವೈದ್ಯಕೀಯ ಕಾಲೇಜನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸಬಾರದು. ಸರ್ಕಾರದಿಂದಲೇ ತೆರೆಯಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸಿದರೆ ಬಡವರಿಗೆ ಹೆಚ್ಚಿನ ಉಪಯೋಗ ಆಗುವುದಿಲ್ಲ. ಅದು ಮತ್ತೆ ಖಾಸಗಿಯವರ ಒಡೆತನಕ್ಕೆ ಹೋಗಿ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಲಿದೆ. ಇದಕ್ಕಾಗಿ ಅನುದಾನವೂ ಹೆಚ್ಚಿಗೆ ಇರುವುದರಿಂದ ಸರ್ಕಾರದಿಂದಲೇ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಮುಂದಿನ ಬಜೆಟ್‌ನಲ್ಲಿವೈದ್ಯಕೀಯ ಕಾಲೇಜನ್ನು ಸೇರಿಸಬೇಕು. ಸಂಪುಟ ಸಭೆಯಲ್ಲೂ ಒಪ್ಪಿಗೆ ಪಡೆಯಬೇಕು. ಕಾಲೇಜಿಗೆ ಶಂಕುಸ್ಥಾಪನೆ ಮಾಡುವ ಬದಲು ಉದ್ಘಾಟನೆಯನ್ನೇ ಮಾಡಬೇಕು. ಶಂಕುಸ್ಥಾಪನೆ ಮಾಡಿದರೆ ಮತ್ತೆ ಕಾಲೇಜು ಆರಂಭವಾಗುವುದು ವಿಳಂಬವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಧನ್ಯಕುಮಾರ್‌, ಅಜ್ಜಯ್ಯ ಮೆದಿಕೇರನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.