ದಾವಣಗೆರೆ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ ರ್ಯಾಂಕಿಂಗ್ ಟೂರ್ನಮೆಂಟ್ ಭಾನುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.
ಶಾಸಕ ಎಸ್.ಎ. ರವೀಂದ್ರನಾಥ್ ಟೂರ್ನಮೆಂಟ್ಗೆ ಚಾಲನೆ ನೀಡಿ ಮಾತನಾಡಿ, ‘ಇಂಥ ಕ್ರೀಡಾಕೂಟಗಳನ್ನು ಆಯೋಜಿಸಿದಾಗ ದಾವಣಗೆರೆ ಪ್ರಸಿದ್ಧಿ ಪಡೆಯುತ್ತದೆ. ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಅದಕ್ಕೂ ಪೂರ್ಣ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ‘ರಾಜ್ಯ, ರಾಷ್ಟ್ರಮಟ್ಟದ ಪಂದ್ಯಗಳನ್ನು ಆಯೋಜಿಸಿದಾಗ ಸ್ಥಳೀಯ ಮಕ್ಕಳಿಗೆ ಅನುಕೂಲವಾಗುತ್ತದೆ. ಉತ್ತಮ ರ್ಯಾಂಕಿಂಗ್ ಹೊಂದಿರುವ ಕ್ರೀಡಾಪಟುಗಳ ಆಟ ಇಲ್ಲೇ ನೋಡಲು ಸಾಧ್ಯವಾಗುತ್ತದೆ. ಇದು ಇಲ್ಲಿನ ಮಕ್ಕಳ ಆಟದ ಗುಣಮಟ್ಟ
ಹೆಚ್ಚಿಸಲು ಉಪಯೋಗಕಾರಿ’ ಎಂದು ಹೇಳಿದರು.
ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎನ್. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಆರ್. ಗಿರಿರಾಜ್, ಖಜಾಂಚಿ ಇಸ್ಮಾಯಿಲ್ ಎಂ., ನಿರ್ದೇಶಕರಾದ ಸುರೇಶ್ ಗಂಡ್ಗಾಳೆ, ಜಯಪ್ರಕಾಶ್ ಆರ್., ಮಲ್ಲಿಕಾರ್ಜುನ್ ಕೋಟೆಹಾಳ್, ಸುಗಂಧಾ
ಗಂಗಾಧರ್ ಪಾಲಿಕೆ ಸದಸ್ಯರಾದ
ಶಿಲ್ಪಾ ಜಯಪ್ರಕಾಶ್, ರೇಖಾ ಸುರೇಶ್ ಗಂಡ್ಗಾಳೆ ಉಪಸ್ಥಿತರಿದ್ದರು.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯಲ್ಲಿ ಒಟ್ಟು 653 ಸ್ಪರ್ಧಿಗಳು ಭಾಗವಹಿಸಿದ್ದಾರೆ. 15 ವರ್ಷ, 17 ವರ್ಷದೊಳ ಬಾಲಕರ ವಿಭಾಗ, ಬಾಲಕಿಯರ ವಿಭಾಗ ಮಿಕ್ಸೆಡ್ ಸ್ಪರ್ಧೆಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.