ದಾವಣಗೆರೆ: ಕೃಷಿ ಕಾಯ್ದೆಗಳನ್ನು ಖಂಡಿಸಿ ಕೇಂದ್ರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ನಿರ್ಲಕ್ಷಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಜುಲೈ 25ರಿಂದ ಆಗಸ್ಟ್ 9ರವರೆಗೆ ದೇಶದಾದ್ಯಂತ ನಡೆಯುವ ಪ್ರಚಾರಾಂದೋಲನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದುಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಮುಖಂಡ ಟಿ. ಯಶವಂತ ಮನವಿ ಮಾಡಿದರು.
ನಗರದ ವಿಮಾ ಪ್ರತಿನಿಧಿಗಳ ಸಭಾಂಗಣದಲ್ಲಿ ಶನಿವಾರ ನಡೆದ ಸಿಐಟಿಯು, ಕೆಪಿಆರ್ಎಸ್ ಹಾಗೂ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೃಷಿ ಭೂಮಿಯು ಕಾರ್ಪೊರೆಟ್ ಕಂಪನಿಗಳ ಕೈವಶವಾದರೆ ಆಹಾರ ಭದ್ರತೆ ಸಂಪೂರ್ಣ ನಾಶವಾಗಿ ಹಸಿವು, ನಿರುದ್ಯೋಗ ತಾಂಡವವಾಡಲಿದೆ. ಮೋದಿ ಸರ್ಕಾರದ ತಪ್ಪು ನೀತಿಗಳಿಂದ ಕೃಷಿ ಕ್ಷೇತ್ರ ದಿವಾಳಿಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿ, ‘ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕೇವಲ ನಾಲ್ಕು ಸಂಹಿತೆಗಳನ್ನಾಗಿಸಿದೆ. ಒಂದು ಕಡೆ ಕನಿಷ್ಠ ವೇತನ ಹಾಗೂ ಜೀವನ ಭದ್ರತೆ ಕಿತ್ತುಕೊಂಡು ಇನ್ನೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಸಿ ದುಡಿಯುವ ಜನರನ್ನು ಸುಲಿಗೆ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.
‘ಕೇಂದ್ರದ ನಿರ್ಲಕ್ಷ್ಯ ಹಾಗೂ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ರೈತ-ಕೂಲಿಕಾರರು ಹಾಗೂ ಕಾರ್ಮಿಕರು ಮನೆ ಮನೆಗಳಿಗೆ ಹೋಗಿ ಪ್ರಚಾರಾಂದೋಲನ ನಡೆಸಿ ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾ ದಿನವಾದ ಆಗಸ್ಟ್ 9ರಂದು ದೇಶಾದ್ಯಂತ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಹೇಳಿದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಆನಂದರಾಜು ಕೆ.ಎಚ್., ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಸಂಚಾಲಕ ಉಮೇಶ್, ಕಟ್ಟಡ ಕಾರ್ಮಿಕ ಸಂಘದ ಮುಖಂಡ ತಿಮ್ಮಣ್ಣ, ಹರಿಹರ ಬಿರ್ಲಾ ಗ್ರಾಸಿಂ ಕಾರ್ಮಿಕ ಸಂಘದ ಮುಖಂಡ ಮಲ್ಲನಗೌಡ, ರೈತ ಮುಖಂಡರಾದ ಶ್ರೀನಿವಾಸ್, ಭರಮಪ್ಪ ಎಸ್ಎಫ್ಐ ಮುಖಂಡ ಅನಂತ್ ರಾಜ್, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ತಿಮ್ಮಣ್ಣ, ಹರಪನಹಳ್ಳಿ ರೈತ ಮುಖಂಡ ರಾಜಪ್ಪ, ದಾವಣಗೆರೆ ರೈತ ಮುಖಂಡರಾದಹಾಲೇಶನಾಯ್ಕ ಅವರೂ ಸಭೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.