ADVERTISEMENT

ಸಂಸತ್ತಿನಲ್ಲಿ ಜನಾಗ್ರಹದ ಧ್ವನಿ ಮೊಳಗಲಿ

ಎಸ್‌ಯುಸಿಐಸಿ ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀರಾಮ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 7:45 IST
Last Updated 21 ಏಪ್ರಿಲ್ 2019, 7:45 IST
ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌.ಯು.ಸಿ.ಐ(ಸಿ) ಪಕ್ಷದ ಅಭ್ಯರ್ಥಿ ಮಧು ತೊಗಲೇರಿ ಪರ ಪ್ರಚಾರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎನ್‌. ಶ್ರೀರಾಮ್‌ ಮಾತನಾಡಿದರು.
ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌.ಯು.ಸಿ.ಐ(ಸಿ) ಪಕ್ಷದ ಅಭ್ಯರ್ಥಿ ಮಧು ತೊಗಲೇರಿ ಪರ ಪ್ರಚಾರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎನ್‌. ಶ್ರೀರಾಮ್‌ ಮಾತನಾಡಿದರು.   

ದಾವಣಗೆರೆ: ‘ಸಂಸತ್ತಿನಲ್ಲಿ ಜನಪರ ಕೆಲಸ ಮಾಡಲು ಅವರ ಪರ ಧ್ವನಿ ಮೊಳಗಿಸಲು ಅಭ್ಯರ್ಥಿಯು ಜನಪರ ಹೋರಾಟಗಳಿಂದ ಹೊರಹೊಮ್ಮಿರಬೇಕು’ ಎಸ್.ಯು.ಸಿ.ಐ.(ಸಿ) ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎನ್. ಶ್ರೀರಾಮ್‌ ಹೇಳಿದರು.

ನಗರದ ಜಯದೇವ ವೃತ್ತದದಲ್ಲಿ ಪಕ್ಷದ ಅಭ್ಯರ್ಥಿ ಮಧು ತೊಗಲೇರಿ ಪರ ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ, ಕಾಂಗ್ರೆಸ್‌ನಂತಹ ದೊಡ್ಡ ಪಕ್ಷಗಳ ಮಾಜಿ ಸಂಸದರಿಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. 16ನೇ ಸಂಸತ್ತಿನಲ್ಲಿದ ಸಂಸದರಲ್ಲಿ ಮೂರನೇ ಒಂದರಷ್ಟು ಜನ ಅಪರಾಧದ ಹಿನ್ನೆಲೆಯವರಾಗಿದ್ದರು. 400ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳಾಗಿದ್ದರು. ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗೆಲ್ಲುವ ಸಂಸದರಿಂದ ಕ್ಷೇತ್ರದ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ADVERTISEMENT

ಎಸ್.ಯು.ಸಿ.ಐ.(ಸಿ) ಪಕ್ಷವು ದೇಶದಾದ್ಯಂತ 118 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ರಾಜ್ಯದ ಏಳು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇಂದು ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ಪ್ರಚಾರ ಮಾಡುತ್ತಿವೆ. ಆದರೆ, ಜನರ ಗಂಭೀರ ವಿಷಯಗಳು ಚರ್ಚೆಗೆ ಬರುತ್ತಿಲ್ಲ. ಪ್ರಜಾತಾಂತ್ರಿಕ ಚುನಾವಣೆಯಲ್ಲಿ ಜನರಿಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಬೇಕು. ಜನರ ಕುರಿತು ಪಕ್ಷಗಳ ನೀತಿಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕೇವಲ ಬಂಡವಾಳಶಾಹಿ ಪರವಾದ, ಜನವಿರೋಧಿ ನೀತಿಗಳನ್ನೇ ಅನುಸರಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಯಾವುದೇ ರೀತಿಯಲ್ಲೂ ಪರ್ಯಾಯವಾಗಲು ಸಾಧ್ಯವಿಲ್ಲ. ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ ಇದೇ ಜನವಿರೋಧಿ ನೀತಿಗಳನ್ನೇ ಅನುಸರಿಸಿತ್ತು. ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ ಎಂದು ದೂರಿದರು.

ಸಂಸತ್ತಿನಲ್ಲಿ ಜನ ಹೋರಾಟದ ಧ್ವನಿ ಎತ್ತಲು ಹೋರಾಟಗಳಲ್ಲಿ ನಿರತವಾಗಿರುವ ಮಧು ತೊಗಲೇರಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ಮಧು ತೊಗಲೇರಿ, ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ. ಸನೀತ್‌ಕುಮಾರ್‌ ಮಾತನಾಡಿದರು. ಪಕ್ಷದ ದಾವಣಗೆರೆ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.