ADVERTISEMENT

ದಾವಣಗೆರೆ: ಸಹಜ ಸ್ಥಿತಿಗೆ ಜನ ಜೀವನ, ಇಲ್ಲದ ಖರೀದಿ ಭರಾಟೆ

ಭಾನುವಾರದ ಲಾಕ್‌ಡೌನ್ ತೆರವು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 16:02 IST
Last Updated 2 ಆಗಸ್ಟ್ 2020, 16:02 IST
ಭಾನುವಾರದ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯ ಅಶೋಕ ರಸ್ತೆಯ‌ಲ್ಲಿ ಜನರ ಸಂಚಾರ
ಭಾನುವಾರದ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯ ಅಶೋಕ ರಸ್ತೆಯ‌ಲ್ಲಿ ಜನರ ಸಂಚಾರ   

ದಾವಣಗೆರೆ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ್ದ ಭಾನುವಾರದ ಲಾಕ್‌ಡೌನ್ ತೆರವುಗೊಳಿಸಿದ್ದು, ಜನ, ವಾಹನ ಸಂಚಾರ ಸಹಜವಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು.

ಲಾಕ್‌ಡೌನ್ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಅಶೋಕ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಹದಡಿ ರಸ್ತೆ, ಹಳೆ ಪಿಬಿ ರಸ್ತೆ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರದ ಕಂಬ, ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ವಿದ್ಯಾರ್ಥಿ ಭವನ ಸೇರಿ ಇತರೆ ಭಾಗಗಳಲ್ಲಿ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.

ಎಪಿಎಂಸಿಯಲ್ಲಿ ಎಂದಿನಂತೆ ತರಕಾರಿ, ಹೂವು, ಹಣ್ಣು ಇತರೆ ಅಗತ್ಯ ವಸ್ತುಗಳ ವಹಿವಾಟು ನಡೆಯಿತು.
ನಗರದ ಕೆ.ಆರ್.ಮಾರುಕಟ್ಟೆ, ಗಡಿಯಾರದ ಕಂಬದ ಬಳಿ ತರಕಾರಿ ಅಂಗಡಿಗಳು ತೆರೆದಿದ್ದರೂ ಭಾನುವಾರದ ಖರೀದಿ ಭರಾಟೆ ಇರಲಿಲ್ಲ. ವಿನೋಬನಗರ 2ನೇ ಮುಖ್ಯ ರಸ್ತೆ, ಭಾರತ್ ಕಾಲೋನಿ, ಡಾಂಗೆಪಾರ್ಕ್, ಕೆಟಿಜೆ ನಗರದ ಮಾಂಸದ ಅಂಗಡಿಗಳಲ್ಲಿ ಶ್ರಾವಣ ಮಾಸವಾದ್ದರಿಂದ ಗಿಜಿಗುಡುವ ವಾತಾವರಣ ಇರಲಿಲ್ಲ.

ಆಗಸ್ಟ್ 2ರವರೆಗೆ ಭಾನುವಾರ ಲಾಕ್‌ಡೌನ್ ಎಂದು ಘೋಷಿಸಿದ್ದರ ಹಿನ್ನೆಲೆಯಲ್ಲಿ ಗೊಂದಲ ಸಾರ್ವಜನಿಕರಲ್ಲಿತ್ತು. ಹಾಗಾಗಿ ಸಂಡೇ ಲಾಕ್‌ಡೌನ್ ಇಲ್ಲದಿದ್ದರೂ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬರಲಿಲ್ಲ. ಮಧ್ಯಾಹ್ನದ ನಂತರ ತುಸು ಹೆಚ್ಚಿನ ಜನರು ಸಂಚರಿಸಿದರು.

ADVERTISEMENT

ಸಾರಿಗೆ ಬಸ್‌ಗಳು, ಆಟೊ, ಕ್ಯಾಬ್‌ಗಳು ಸಂಚರಿಸಿದವು. ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಸಣ್ಣ- ದೊಡ್ಡ, ಬೀದಿ ಬದಿಯ ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು. ಆದರೆ ವ್ಯಾಪಾರ ಅಷ್ಟಾಗಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.